02/09/2026
ಮನಸ್ಸಿದ್ದಲ್ಲಿ ಮಾರ್ಗ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೇ?
ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಸ್ಸು ತಂಗುದಾಣ. ನಿನ್ನೆಯ ದಿನ (01/09/2026) ಮಧ್ಯಾಹ್ನ ನಮ್ಮ ಪಕ್ಷದ ಈ ಹಿಂದೆ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಆರತಿ ಅಶೋಕ್ ಅವರು ತಮ್ಮ ವೈಯಕ್ತಿಕ ಕೆಲಸಗಳಿಗೆ ಉಡುಪಿಗೆ ಹೋಗುತ್ತಿರುವಾಗ ಬಸ್ ನಿಲ್ದಾಣ ದುಸ್ಥಿತಿಯಲ್ಲಿರುವುದನ್ನು ಗಮನಿಸಿ ತಕ್ಷಣದಲ್ಲಿ ಅದರ ಛಾಯಾಚಿತ್ರ ತೆಗೆದು ಕುಕ್ಕುಂದೂರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಶ್ರೀಯುತ ಪ್ರದೀಪ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದು, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ತ್ವರಿತ ಗತಿಯಲ್ಲಿ ಕಾರ್ಯಪ್ರವೃತ್ತರಾಗಿ ಕೆಲವೇ ಗಂಟೆಗಳಲ್ಲಿ ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಬಸು ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ.
ಇದೇ ಮಾದರಿಯಲ್ಲಿ ಮೊನ್ನೆಯ ದಿನ ಬೆಳಗ್ಗೆ (31/08/2026) ಅದೇ ಪಂಚಾಯಿತಿಗೆ 2021ರಿಂದ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಅಲೆದಾಡಿ, ಅಲೆದಾಡಿ ಬೇಸತ್ತ ಒಬ್ಬ ಸಾರ್ವಜನಿಕ ಆ ಕೆಲಸಕ್ಕಾಗಿ ನಮ್ಮನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ, ನೊಂದವರ ಪರವಾಗಿ ಪಿಡಿಒರವರನ್ನು ದೂರವಾಣಿ ಮುಖಾಂತರ ತಲುಪಿ ಆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ತಕ್ಷಣದಲ್ಲಿ ಸ್ಪಂದಿಸಿ ಕೆಲವೇ ಗಂಟೆಗಳಲ್ಲಿ ಮಾಹಿತಿಯನ್ನು ನೀಡಿ ಸುಮಾರು ಐದು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲಸವನ್ನು ಮಾಡಿಕೊಟ್ಟಿರುತ್ತಾರೆ.
ಇದನ್ನೆಲ್ಲಾ ನೋಡಿದರೆ ಮತ್ತು ನನ್ನ ಗಮನಕ್ಕೆ ಬಂದಿರುವಂತೆ ಉಡುಪಿ ಜಿಲ್ಲೆಯಾದ್ಯಂತ ಹಲವಾರು ಕರ್ತವ್ಯನಿಷ್ಠ, ಪ್ರಾಮಾಣಿಕ, ಜನಸಾಮಾನ್ಯರ ಕಷ್ಟ ನಷ್ಟಗಳನ್ನು ಅರಿತು ಸರ್ಕಾರಿ ಕೆಲಸ ಮಾಡುವ ಅಧಿಕಾರಿಗಳಿದ್ದರೂ ಅವರನ್ನು ಗುರುತಿಸಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಎಲ್ಲೋ ಒಂದು ಕಡೆ ಜನಸಾಮಾನ್ಯರೇ ವಿಫಲರಾಗುತ್ತಿದ್ದು, ಅಂತಿಮವಾಗಿ ಲಂಚ ನೀಡಿದ ಕೆಲಸ ಮಾಡಿಸಿ ಕೊಳ್ಳುವ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ.
ಮೇಲಿನ ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟ ಕುಕ್ಕುಂದೂರು ಗ್ರಾಮ ಪಂಚಾಯಿತಿ ಪಿಡಿಓ ಶ್ರೀಯುತ ಪ್ರದೀಪ್ ಶೆಟ್ಟಿ ಅವರಿಗೆ ಕೆ ಆರ್ ಎಸ್ ಪಕ್ಷದ ಮತ್ತು ಕಾರ್ಕಳದ ಜನತೆ ಪರವಾಗಿ ಧನ್ಯವಾದಗಳು.
ವಿ ಆರ್ ಮರಾಠೆ
ರಾಜ್ಯ ಖಜಾಂಚಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ,
ಕೆ ಆರ್ ಎಸ್ ಪಕ್ಷ.