24/08/2022
*ಬೆಳ್ಕಲ್ ತೀರ್ಥ ರಸ್ತೆಯ ಗೋಳು ಕೇಳಿ. ಪ್ರವಾಸಿಗರಿಂದ ಅನಧಿಕೃತ ವಸೂಲಿ ನಿಲ್ಲಿಸಿ*.
ಬೆಳ್ಕಲ್ ತೀರ್ಥ ಫಾಲ್ಸ್ ಹೆಸರು ನೀವು ಕೇಳಿಯೇ ಇರುತ್ತೀರಿ. ಇದು ಅದೇ ಬೆಳ್ಕಲ್ ಫಾಲ್ಸ್ಗೆ ಹೋಗುವ ರಸ್ತೆ. ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮಪಂಚಾಯತ್ ವ್ಯಾಪ್ತಿಯ ಮುದೂರು ಗ್ರಾಮದಲ್ಲಿದೆ ಈ ಬೆಳ್ಕಲ್ ತೀರ್ಥ. ಜಲಪಾತ ಪ್ರತಿವರ್ಷ ಸಾವಿರಾರು ಜನರನ್ಯು ಆಕರ್ಷಿಸಿದರೂ ಅಲ್ಲಿಗೆ ಹೋಗುವ *ರಸ್ತೆಯ ಪಾಡು ಮಾತ್ರ ಹೇಳತೀರದು*.
*ಈ ರಸ್ತೆ ಈ ಊರಿನ ಐವತ್ತಕ್ಕೂ ಹೆಚ್ಚಿನ ಮನೆಗಳಿಗೆ ಸಂಪರ್ಕ ರಸ್ತೆ. ಅಂಗಡಿ, ಆಸ್ಪತ್ರೆ, ಶಾಲೆ ಎಲ್ಲಿಗೆ ಹೋಗಬೇಕಾದರೂ ಈ ರಸ್ತೆಯೇ ಜೀವನಾಡಿ. ಈ ರಸ್ತೆಯನ್ನು ಅವಲಂಬಿತರಾಗಿ ಮಕ್ಕಳು, ಮಹಿಳೆಯರು, ವೃದ್ಧರೂ ಎಲ್ಲರೂ ಇದ್ದಾರೆ. ರಸ್ತೆ ಮಾತ್ರ ವಾಹನ ಒಡಾಟಕ್ಕೆ ಬಿಡಿ, ನಡೆಯಲಿಕ್ಕೂ ಲಾಯಕ್ಕಾಗಿಲ್ಲ*.
ರಸ್ತೆ ದುರಸ್ತಿ ಮಾಡಿಕೊಡಿ ಎಂದು ಸರ್ಕಾರಕ್ಕೆ ಹಲವು ಬಾರಿ ಆಗ್ರಹಿಸಿಯಾಗಿದೆ. ಸ್ಥಳೀಯ ಶಾಸಕರಾದ ಸುಕುಮಾರ ಶೆಟ್ಟಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಲಾಗಿದೆ. ಆದರೆ ರಸ್ತೆಯ ಗೋಳು ಕೇಳುವವರಿಲ್ಲವಾಗಿದೆ.
*ಇನ್ನೂ ಒಂದು ದುರಂತ ಏನು ಗೊತ್ತೆ? ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ನಮ್ಮೂರಿನ ಬೆಳ್ಕಲ್ ತೀರ್ಥ ಫಾಲ್ಸ್ಗೆ ಬರುವ ಜನರಿಂದ ಅರಣ್ಯ ಇಲಾಖೆ ಪ್ರತಿ ಪ್ರವಾಸಿಗರಿಗೆ ನೂರು ರೂಪಾಯಿ ಶುಲ್ಕ ವಸೂಲಿ ಮಾಡುತ್ತಿದೆ. ಇದು ಅನಧಿಕೃತ ವಸೂಲಿಯೋ ಅಧಿಕೃತವೋ ಗೊತ್ತಿಲ್ಲ. ಆದರೆ ಹೀಗೆ ನೂರು ರೂ ಪ್ರವಾಸಿಗರಿಂದ ವಸೂಲಿ ಮಾಡುವ ಅರಣ್ಯ ಇಲಾಖೆ ಬೆಳ್ಕಲ್ ಫಾಲ್ಸ್ ಪ್ರವಾಸಿಗರಿಗೆ ಕನಿಷ್ಟ ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಅಥವಾ ಉಡುಪು ಬದಲಾಯಿಸುವ ಕೊಠಡಿಯ ವ್ಯವಸ್ಥೆಯನ್ನೂ ಮಾಡಿಲ್ಲ.* ಈ ವಸೂಲಿಯನ್ನು ಗ್ರಾಮಸ್ಥರ ಆಗ್ರಹದ ಮೇರೆಗೆ ಕೆಲ ಕಾಲ ನಿಲ್ಲಿಸಲಾಯಿತು. ಆದರೆ ಅದೇ ವಸೂಲಿ ಈಗ ಮತ್ತೆ ಆರಂಭಗೊಂಡಿದೆ. ಇಷ್ಟು ವಸೂಲಿ ಮಾಡಿದರೂ ಗ್ರಾಮಸ್ಥರಿಗೂ, ಪ್ರವಾಸಿಗರಿಗೂ ಅತ್ಯಂತ ದುರವಸ್ಥೆಯ ರಸ್ತೆಯೇ ಗತಿಯಾಗಿದೆ.
*ದಯವಿಟ್ಟು ಬೆಳ್ಕಲ್ ಗ್ರಾಮದ ರಸ್ತೆಯ ದುರವಸ್ಥೆಯನ್ನು ಸರಿಪಡಿಸಿ. ಒಂದು ಸರ್ವ ಋತು ರಸ್ತೆ ನಿರ್ಮಿಸಿ ಕೊಡಿ*. ಊರಿನ ಸಮಸ್ತ ಜನತೆಗೆ ಉಪಕಾರ ಮಾಡಿ. ಜೊತೆಗೆ ಊರಿನ ಆಕರ್ಷಣೆಯಾದ ಬೆಳ್ಕಲ್ ತೀರ್ಥಕ್ಕೆ ಬರುವ ಪ್ರವಾಸಿಗರಿಗಾಗಿಯೂ ಈ ರಸ್ತೆ ಸರಿಪಡಿಸುವುದು ಅಗತ್ಯವಾಗಿದೆ. ಜೊತೆಗೆ *ಪ್ರವಾಸಿಗರಿಂದ ನೂರು ರೂಪಾಯಿ ವಸೂಲಿಯನ್ನು ನಿಲ್ಲಿಸಿ*. ಇಷ್ಟು ನಮ್ಮ ಬೇಡಿಕೆ. *ಸರ್ಕಾರ, ಶಾಸಕರು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಗ್ರಾಮಪಂಚಾಯತ್ ಇತ್ತ ಕಡೆ ಗಮನಹರಿಸುವುದೆ*?
✍️ರಾಘವೇಂದ್ರ ಬೆಳ್ಕಲ್