13/05/2026
ಕರ್ನಾಟಕ ನಂಬರ್ 1 ಕೂಲಿ ಕಳ್ಳರ ರಾಜ್ಯ - ಆರ್.ಮಾನಸಯ್ಯ
ಆರೋಗ್ಯ ಇಲಾಖೆಯಲ್ಲಿ ಭಾರಿ ಪ್ರಮಾಣದ ಕೂಲಿ ಕಳ್ಳತನ; ಕಠಿಣ ಕ್ರಮ ಕೈಗೊಳ್ಳಿ!
ಹೊರಗುತ್ತಿಗೆ ಪದ್ಧತಿ ಎಂಬುದು,ಅಗ್ಗದ ದರದಲ್ಲಿ ಶ್ರಮಶಕ್ತಿಯನ್ನು ಕೊಳ್ಳುವ ಅಥವಾ ಕೊಳ್ಳೆ ಹೊಡೆಯುವ ಬಂಡವಾಳ ಶಾಹಿ ದುರ್ಮಾರ್ಗವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿರುವ ಹೊರ ಗುತ್ತಿಗೆ ನೌಕರರ / ಕಾರ್ಮಿಕರರ ಸ್ಥಿತಿಗತಿಯೆ ಜೀವಂತ ಸಾಕ್ಷಿಯಾಗಿದೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಂತೂ ಇದರ ತವರು ಮನೆಯಾಗಿ ಮಾರ್ಪಟಾಗಿದೆ. ಸರಕಾರದ ಖಾಲಿ ಇರುವ ಎಲ್ಲಾ ಹುದ್ದೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ಕಾನೂನ ಬಾಹಿರವಾಗಿ ದುಡಿಸಲಾಗುತ್ತದೆ. ಅಷ್ಟೇ ಅಲ್ಲ ಅವರಿಗೆ ಸಿಗಬೇಕಾದ ಕೂಲಿಯನ್ನು ಪೂರ್ಣ ಪ್ರಮಾಣದಲ್ಲಿ ಕಳ್ಳತನ ಮಾಡಲಾಗುತ್ತದೆ.ಇದು ರಾಜ್ಯ ಸಚಿವಾಲಯದಿಂದ ತಳಮಟ್ಟದ ಇಲಾಖೆಯವರೆಗೆ ಬಾರಿ ಪ್ರಮಾಣದ ಕೂಲಿ ಕಳ್ಳರ ಜಾಲವನ್ನೇ ಹೊಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ಏಜೆನ್ಸಿಗಳ ಸೂಪರ್ ಶಾಮೀಲು ದಂದೆ ಇದಾಗಿದೆ. ವ್ಯವಸ್ಥಿತವಾದ ಅಪಾರ ಪ್ರಮಾಣದ ಕೂಲಿ ಕಳ್ಳತನವನ್ನು ನಿರಂತರ ಮಾಡುವ ಮಾಫಿಯಾ ಇದಾಗಿದೆ.
ಇದಕ್ಕೆ ರಾಯಚೂರು ಜಿಲ್ಲೆಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಜ್ವಲಂತ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ 228 ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರಿಗೆ ಕಳೆದ 9 ತಿಂಗಳುಗಳಿಂದ ಕೂಲಿಯೆ ಇಲ್ಲಾ! ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ /ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮತ್ತಿತರ ಆಸ್ಪತ್ರೆಗಳಲ್ಲಿ ವರ್ಷಪೂರ್ತಿ ಕೆಲಸಕ್ಕೆ ಎಂದು ನೇಮಿಸಿಕೊಳ್ಳಲಾಗಿದೆ. ಆದರೆ,2025 ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಕೆಲಸದಿಂದ ಇವರನ್ನು ರಿಲೀವ್ ಎಂಬ ನಾಟಕವಾಡಿ ಇವರ ಪಾಲಿನ 4 ತಿಂಗಳ ವೇತನ 13338088 ರೂನ್ನು ರಾಜಾರೋಷವಾಗಿ ಕದಿಯಲಾಗಿದೆ.
ಇದೇ ರೀತಿ, 2025 ರ ಡಿಸೆಂಬರ್ ಹಾಗೂ 2026 ರ ಜನವರಿ ಫೆಬ್ರವರಿ ಮಾರ್ಚ್ ಹಾಗೂ ಏಪ್ರಿಲ್ ಒಟ್ಟು ಐದು ತಿಂಗಳ ಕೂಲಿಯನ್ನು ಪಾವತಿಸದೆ 228 ಸಿ ಮತ್ತು ಡಿ ಗ್ರೂಪ್ ನೌಕರರನ್ನು ಗುಲಾಮರಂತೆ ಸರ್ಕಾರಿ ಆಸ್ಪತ್ರೆಯಲ್ಲಿ ದು ಡಿಸಲಾಗುತ್ತಿದೆ. ಗಟ್ಟಿಯಾಗಿ ಕೂಲಿ ಕೇಳಿದ ಕಾರ್ಮಿಕರು ಇಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ.
2025 ರಲ್ಲಿ ಗುತ್ತಿಗೆ ಹಿಡಿದ ಮೆ. ಶಾರ್ಪ್ ವಾಚ್ ಇನ್ವೆಸ್ಟಿಗೇಷನ್ ಸೆಕ್ಯೂರಿಟಿ ಸರ್ವಿಸಸ್ ಮೈಸೂರ ಹಾಗೂ ಪ್ರಸ್ತುತ 2026 ರಲ್ಲಿ ಗುತ್ತಿಗೆ ಹಿಡಿದಿರುವ ಪಾಪುಲರ್ ಇಂಜಿನಿಯರಿಂಗ್ ಸರ್ವಿಸಸ್ ಬಳ್ಳಾರಿ ಇವುಗಳು ಆಳುವ ವರ್ಗದ ಅವಳಿ ಪಕ್ಷದ ಪುಡಾರಿಗಳ ಒಡೆತನದಲ್ಲಿವೆ. ಹೊರಗುತ್ತಿಗೆ ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೇರಿಕೊಂಡು ರಾಯಚೂರು ಜಿಲ್ಲೆಯಲ್ಲಿ 30008448 ಕೂಲಿ ಕೊಳ್ಳೆ ಹೊಡೆದಿದ್ದಾರೆ ಎಂದರೆ ನೀವು ನಂಬಲೇ ಬೇಕಾಗುತ್ತದೆ.
ಹೊರಗುತ್ತಿಗೆ ಕಾರ್ಮಿಕರ ಶ್ರಮವನ್ನು ದೋಚಿ ಅವರ ಕೂಲಿ ಹಣವನ್ನು ಅಪರಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಹಾಗೂ ಹೊರಗುತ್ತಿಗೆ ಸಂಸ್ಥೆಗಳ ಮೇಲೆ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು, ರಾಯಚೂರು ಜಿಲ್ಲಾ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಿ ಮತ್ತು ಡಿ ಗ್ರೂಪ್ ಹೊರ ಗುತ್ತಿಗೆ ನೌಕರ ಸಂಘವು, ಇಂದು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ದೂರು ಸಲ್ಲಿಸಿದೆ.
ಈ ದೂರಿನಲ್ಲಿ ಕೂಡಲೇ 228 ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ 9 ತಿಂಗಳುಗಳ ಸಂಬಳವನ್ನು ಪಾವತಿ ಮಾಡಬೇಕೆಂದು ಒತ್ತಾಯಿಸಲಾಗಿದೆ.ಜಿಲ್ಲೆಯಲ್ಲಿ 119 ಡಿ ಗ್ರೂಪ್ , 34 ನಾನ್ ಕ್ಲಿನಿಕಲ್, 17 ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, 11 ಗಣಕಯಂತ್ರ ಸಹಾಯಕರು, 17 ಫಾರ್ಮಸಿ ಅಧಿಕಾರಿಗಳು, 12 ಜನ ಶುಶ್ರೂಷಕರು ಹಾಗೂ 18 ಜನ ವಾಹನ ಚಾಲಕರು ಕಳೆದ ಹತ್ತಾರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಪ್ರತಿಯೊಬ್ಬರು ಒಂದರಿಂದ ಎರಡು ಲಕ್ಷದಷ್ಟು ಕೈಲಂಚ ಕೊಟ್ಟು ಶಾಸಕರ,ಸಚಿವರ ಶಿಫಾರಸ್ಸು ಕಾರ್ಡ್ ಮೂಲಕ ಈ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅಲ್ಲದೆ ಪ್ರತಿ ವರ್ಷವೂ ಬದಲಾಗುವ ಏಜೆನ್ಸಿ ಗಳಿಗೆ ಸರಾಸರಿ 25,000 ಕೊಡುತ್ತಾರೆ. ಅಷ್ಟೇ ಏಕೆ ಕೊಟ್ಟಷ್ಟು ಕೂಲಿ ಅಥವಾ ಕೂಲಿ ಇಲ್ಲದನೆ ಕೆಲಸ ಮಾಡುವ " ಸರ್ಕಾರಿ ನೌಕರಿ " ಬ್ರಾಂಡ್ ಅಸ್ತಿತ್ವಕ್ಕಾಗಿ ಇವರು ಜೀವಂತ ಜೀತಗಾರರಾಗಿದ್ದಾರೆ.
ಇನ್ನು ಕನಿಷ್ಠ ವೇತನ ಕಾಯ್ದೆ,ಸಾಮಾಜಿಕ ಸೌಕರ್ಯ,ಉದ್ಯೋಗ ಭದ್ರತೆ ಹಾಗೂ ಕಾರ್ಮಿಕ ಕಲ್ಯಾಣ ಈ ಹೊರ ಗುತ್ತಿಗೆ ಕಾರ್ಮಿಕರ ಪಾಲಿಗೆ ಗಗನ ಕುಸುಮಗಳಾಗಿವೆ.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಸಂಘವು ಈ ನೌಕರರನ್ನು ಸಂಘಟಿಸಿ ಹೋರಾಟಕ್ಕೆ ಮುಂದಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮ ಕೈಗೊಂಡು ವೇತನ ಪಾವತಿ ಮಾಡಿ,ಈ ಕೂಲಿ ಕಳ್ಳತನ ತಡೆಯದಿದ್ದರೆ ಜಿಲ್ಲಾ ಪಂಚಾಯತ ಎದುರುಗಡೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲು ಸಂಘ ನಿರ್ಧರಿಸಿದೆ. ಘೋಷ್ಠಿಯಲ್ಲಿ ಶಂಕ್ರಪ್ಪ ಗುಂಡೂಸಾಗರ, ಜಗದೇಶ ತುಪ್ಪದ್, ಯಲ್ಲಪ್ಪ, ನಾಗಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು
13-5-2026
ರಾಯಚೂರು