21/07/2026
ರೈತ ಹುತಾತ್ಮ ದಿನಾಚರಣೆಯ ನಮನಗಳು 🙏
ರೈತ ನಮ್ಮ ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ಅನ್ನದಾತ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಗತಿಸಿದರು ರೈತರ ಸಮಸ್ಯೆಗಳು ತಪ್ಪಿಲ್ಲ. ಇಂದು ರೈತ ಸಮುದಾಯ ಹಲವಾರು ಸ್ಥಳೀಯ ಸಮಸ್ಯೆಗಳ ಜೊತೆಗೆ ಜಾಗತಿಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ರೈತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಆಳುವ ಸರ್ಕಾರಗಳ ವಿರುದ್ಧ ಚಳುವಳಿ ರೂಪಿಸಿ ರೈತ ವಿರೋಧಿ ಸರ್ಕಾರದ ನೀತಿಗಳನ್ನು ಬದಲಾಯಿಸಿ ರೈತ ಹಿತ ಕಾಪಾಡಿದ ಅಸಂಖ್ಯಾತ ರೈತ ಮುಖಂಡರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇವರ ತ್ಯಾಗ ಬಲಿದಾನಗಳನ್ನು ಸ್ಮರಣಿಸಿ ಪ್ರಸ್ತುತ ಮತ್ತು ಮುಂದಿನ ದಿನಗಳಲ್ಲಿ ರೈತ ಎದುರಿಸುವ ಬಿಕ್ಕಟ್ಟಿನ ಬಗ್ಗೆ ಜಾಗೃತಿ ವಹಿಸಬೇಕಾಗಿದೆ.
ಜುಲೈ 21 ರ ರೈತ ಹುತಾತ್ಮ ದಿನಾಚರಣೆಯ ಹಿನ್ನೆಲೆ
ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಾಳು ಹಸನಾಗಬೇಕೆಂದು ನೀರಾವರಿ ಸೌಲಭ್ಯ ಒದಗಿಸಲು ಮಲಪ್ರಭಾ ನದಿಗೆ ಸವದತ್ತಿ ಬಳಿಯ ನವಿಲು ತೀರ್ಥದಲ್ಲಿ ಆಣೆಕಟ್ಟು ನಿರ್ಮಾಣವಾಯಿತು. ಆದರೆ ಇದಕ್ಕೆ ಪ್ರತಿಯಾಗಿ ಸರ್ಕಾರವು ರೈತರ ಮೇಲೆ ಅಭಿವೃದ್ಧಿ ಕರ ಹೇರಿತು.
ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬಬೇಕಿತ್ತು ಇದನ್ನು ಭರಿಸದೇ ಇದ್ದಾಗ ರೈತರ ಪಹಣಿ ಪತ್ರಿಕೆ ಮೇಲೆ ಸರ್ಕಾರಿ ಎಂದೂ ನಮೂದಿಸಿತು. ಇದರಿಂದ ಸರ್ಕಾರಿ ಸಾಲ, ವಿವಿಧ ಸೌಲಭ್ಯಗಳಿಂದ ರೈತರು ವಂಚಿತರಾಗಬೇಕಾಬೇಕಾಗಿತು. ಇದನ್ನು ವಿರೋಧಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ 21 ಸದಸ್ಯರ ನೇತೃತ್ವದಲ್ಲಿ ನಿರಂತರ ಹೋರಾಟ ಆರಂಭವಾಯಿತು. ರೈತರ ಹೋರಾಟಕ್ಕೆ ಸರ್ಕಾರ ಮಣಿಯಲಿಲ್ಲ. ಆ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥನ್ ಮನವಿಕಾರ ರೈತರನ್ನು ಭೇಟಿಯಾಗುವ ಸೌಜನ್ಯವನ್ನೂ ತೋರಲಿಲ್ಲ. ವಿಶೇಷ ಜಿಲ್ಲಾಧಿಕಾರಿ ಗೋವಿಂದರಾಜ ರೈತರನ್ನು ಬೈದು ಕಳುಹಿಸಿದರು. ಇದೆಲ್ಲದರ ಪರಿಣಾಮವಾಗಿ ಜುಲೈ 21 ರಂದು ನವಲಗುಂದ, ನರಗುಂದ, ಸವದತ್ತಿ ಹಾಗು ರಾಮದುರ್ಗ ತಾಲೂಕುಗಳಲ್ಲಿ ಬಂದ್ ಆಚರಿಸಲಾಯಿತು. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ, ನರಗುಂದ ತಹಶೀಲದಾರರು ಪ್ರತಿಭಟಿಸುತ್ತಿದ್ದ ರೈತರನ್ನು ತುಳಿದುಕೊಂಡೇ ಕಚೇರಿಯ ಒಳಗೆ ನಡೆದರು. ಅದೆ ವೇಳೆಗೆ ಪಿ.ಎಸ್.ಐ. ರೈತರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದ ಜನ ಕಚೇರಿಯನ್ನು ಧ್ವಂಸ ಮಾಡಿ ಪೋಲೀಸರ ಮೇಲೆ ಪ್ರತಿ ದಾಳಿ ಮಾಡಿದರು. ಈ ಗಲಭೆಯಲ್ಲಿ ಮೂವರು ಪೊಲೀಸರು ಬಲಿಯಾದರೆ, ಪೋಲೀಸ ಗುಂಡೇಟಿಗೆ ಈರಪ್ಪ ಕಡ್ಲಿಕೊಪ್ಪ ಎನ್ನುವ ರೈತ ಬಲಿಯಾದ. ಇದೇ ವೇಳೆ ನವಲಗುಂದದಲ್ಲಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರ ಮೇಲೆ ಗೋಳೀಬಾರ್ ನಡೆಯಿತು. ರೈತ ಬಸಪ್ಪ ಲಕ್ಕುಂಡಿ ಆಹುತಿಯಾದರು. ಸಿಟ್ಟಿಗೆದ್ದ ಜನ ನೀರಾವರಿ ಕಚೇರಿಗೆ ಬೆಂಕಿ ಹಚ್ಚಿ ಕಂಡ ಕಂಡ ಅಧಿಕಾರಿಗಳನ್ನು ಬೆನ್ನಟ್ಟಿ ಥಳಿಸಿದರು.
ಮರುದಿನ ಪ್ರಾರಂಭವಾದದ್ದು ಸರಕಾರದ ಪ್ರತೀಕಾರ ಕಾಂಡ. ನವಲಗುಂದ, ನರಗುಂದದಲ್ಲಿ ಹತ್ತಿದ ಬೆಂಕಿ ಇಡೀ ಕರ್ನಾಟಕವನ್ನೇ ವ್ಯಾಪಿಸಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆ ಹಾಗು ಪ್ರತಿಯಾಗಿ ನಡೆದ ಗೋಳೀಬಾರುಗಳಲ್ಲಿ 139 ರೈತರು ಬಲಿಯಾದರು. ರಾಜ್ಯಾದ್ಯಂತ ರೈತ ಸಂಘಟನೆ ರೂಪುಗೊಂಡಿತು. ಇದರ ಫಲವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಪರಾಭವಗೊಂಡು, ರಾಮಕೃಷ್ಣ ಹೆಗಡೆ ಸರಕಾರ ಅಸ್ತಿತ್ವಕ್ಕೆ ಬಂದಿತು.
ಜೂನ್ 21 ನ್ನು ರೈತ ಹುತಾತ್ಮ ದಿನವಾಗಿ ಆಚರಿಸಲಾಗುತ್ತಿದೆ.