02/06/2024
ಕೆ.ಆರ್.ಪೇಟೆ,ಜೂ.೦೨: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ದಿನಸಿ ಸಾಮಗ್ರಿಗಳು, ಬಟ್ಟೆ-ಬರೆ, ಟೀವಿ, ಮೊಬೈಲ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸುಟ್ಟು ನಾಶವಾಗಿರುವ ಘಟನೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ನಡೆದಿದೆ.
ಅಗ್ರಹಾರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸೋಮಶೇಖರ್ ಮತ್ತು ಗಾಯಿತ್ರಿ ದಂಪತಿಗಳ ಮನೆಯಲ್ಲಿ ಈ ವಿದ್ಯುತ್ ಅವಗಡ ಸಂಭವಿಸಿದ್ದು ಕೂಲಿ ಮಾಡಿ ಜೀವನ ಸಾಗಿಸುವ ಈ ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದೆ. ಇದರಿಂದಾಗಿ ಕುಟುಂಬವು ಬೀದಿ ಬಿದ್ದಿದೆ.
ಜೂ.೦೧ರಂದು ಶನಿವಾರ ಬೆಳಿಗ್ಗೆ ೧೦.೩೦ಗಂಟೆ ಸಮಯದಲ್ಲಿ ಸೋಮಶೇಖರ್ ಮತ್ತು ಗಾಯಿತ್ರಿ ಇಬ್ಬರೂ ಸಹ ಎಂದಿನAತೆ ಮನೆಗೆ ಬೀಗ ಹಾಕಿಕೊಂಡು ಕೂಲಿ ಕೆಲಸಕ್ಕೆಂದು ಹೊರ ಹೋಗಿದ್ದರು. ಈ ಸಮಯದಲ್ಲಿ ಮನೆಯೊಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಮನೆಯೊಳಗಿದ್ದ ಅಕ್ಕಿ, ರಾಗಿ, ಬಟ್ಟೆಗಳು, ಟೀವಿ, ಹಾಸಿಗೆ, ಸೇರಿದಂತೆ ವಿವಿಧ ಬಗೆಯ ದಿನಬಳಕೆಯ ವಸ್ತುಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮನೆಯಲ್ಲಿ ಬೆಂಕಿ ಹೊಗೆಯಾಡುತ್ತಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರು ನೀರು ಹಾಕಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟಕ್ಕೂ ಕಡಿಮೆಯಾಗದೇ ಇರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ವಿಷಯ ತಿಳಿದ ತಕ್ಷಣ ಆಗಮಿಸಿದ ಅಗ್ನಿ ಶಾಮಕ ದಳದ ಅಧಿಕಾರಿಗಳು ಬೆಂಕಿಯನ್ನು ನಂದಿಸಿ ಅಕ್ಕಪಕ್ಕದ ಮನೆಗೆ ಬೆಂಕಿ ಹೊತ್ತಿಕೊಳ್ಳದಂತೆ ತಡೆದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಜಗದೀಶ್ ಇತರರು ಬೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಚಿತ್ರಶೀರ್ಷಿಕೆ: ೦೨.ಕೆ.ಆರ್.ಪಿ ೦೩: ಕೆ.ಆರ್.ಪೇಟೆ: ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಸೋಮಶೇಖರ್ ಮತ್ತು ಗಾಯಿತ್ರಿ ದಂಪತಿಗಳು ವಾಸವಿದ್ದ ಬಾಡಿಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಗೆ ಬೆಂಕಿ ಹೊತ್ತಿಕೊಂಡು ದಿನಸಿ ಸಾಮಗ್ರಿಗಳು, ಬಟ್ಟೆ-ಬರೆ, ಟೀವಿ, ಮೊಬೈಲ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಸುಟ್ಟು ನಾಶವಾಗಿರುವುದನ್ನು ಚಿತ್ರದಲ್ಲಿ ಕಾಣಬಹುದು.
============================