20/06/2026
ಹಾಸನ: ಬೇಲೂರು ತಾಲ್ಲೂಕಿನಲ್ಲಿ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಿಯಮ ಬಾಹಿರವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಮಂಜೂರಾತಿ ಮಾಡಿರುವ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಸೇರಿದಂತೆ ಒಟ್ಟು 12 ಜನರನ್ನು ಸಿಐಡಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ್ದ ಸಿಐಡಿ ವಿಶೇಷ ತಂಡವು ತಾಲ್ಲೂಕಿನ ಹಳೇಬೀಡಿನ ಕರಿಕಟ್ಟಿ-ಹಳ್ಳಿಯಲ್ಲಿರುವ ಲಿಂಗೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿದೆ. ಬಳಿಕ ಅವರನ್ನು ಬೆಂಗಳೂರಿಗೆ ಕರೆದೊಯ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಅಧಿಕಾರಿಗಳೂ ಅರೆಸ್ಟ್
ಮಾಜಿ ಶಾಸಕರೊಂದಿಗೆ ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ಸಿಐಡಿ ಶಾಕ್ ನೀಡಿದೆ. ಬಂಧಿತರಲ್ಲಿ ಅಂದಿನ ತಹಶೀಲ್ದಾರ್ ಮೋಹನ್ ಕುಮಾರ್, ರಾಜಸ್ವ ನಿರೀಕ್ಷಕರಾಗಿದ್ದ (ಆರ್.ಐ) ನಾಗರಾಜು, ನಿಂಗರಾಜು, ಉದಿತ್, ಗ್ರಾಮ ಲೆಕ್ಕಾಧಿಕಾರಿಗಳಾದ (ವಿ.ಎ) ರಾಜ್ ಸಾಬ್, ಅಂಕೇಗೌಡ, ಸಾಗರ್, ರವಿನಾಯಕ್ ಹಾಗೂ ಲಿಂಗರಾಜು ಸೇರಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಮುಖ್ಯಾಂಶಗಳು:
• ಅಕ್ರಮದ ವ್ಯಾಪ್ತಿ: 2,750 ಎಕರೆ ಸರ್ಕಾರಿ ಜಮೀನು ನಿಯಮ ಬಾಹಿರವಾಗಿ ಮಂಜೂರು.
• ಸಿಐಡಿ ದಾಳಿ: ಬೆಂಗಳೂರಿನಿಂದ ಬಂದ ವಿಶೇಷ ತಂಡದಿಂದ ಮಿಂಚಿನ ಕಾರ್ಯಾಚರಣೆ.
• ಜಾಮೀನು ಸೀಜ್: ಹೈಕೋರ್ಟ್ನಲ್ಲಿ ಜಾಮೀನು ಸಿಗದೆ ಸಿಕ್ಕಿಬಿದ್ದ ಮಾಜಿ ಶಾಸಕ; ಕೆಲ ಅಧಿಕಾರಿಗಳಿಗೆ ಮುಂಚಿತವಾಗಿಯೇ ಸಿಕ್ಕಿತ್ತು ನಿರೀಕ್ಷಣಾ ಜಾಮೀನು.
ಪ್ರಕರಣದ ಹಿನ್ನೆಲೆ ಏನು?
2018 ರಿಂದ 2023ರ ಅವಧಿಯಲ್ಲಿ ಬೇಲೂರು ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಕೆ.ಎಸ್. ಲಿಂಗೇಶ್, ತಾಲ್ಲೂಕು ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿಯೂ ಜವಾಬ್ದಾರಿ ಹೊತ್ತಿದ್ದರು. ಈ ಅವಧಿಯಲ್ಲಿ ಅರ್ಹರನ್ನು ಬದಿಗಿಟ್ಟು, ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಕವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಅಧಿಕಾರಿಯ ಪತ್ರದಿಂದ ಬಯಲಾದ ದಂಧೆ:
2016 ರಿಂದ 2020ರ ಅವಧಿಯ ಭೂ ಮಂಜೂರಾತಿ ಪ್ರಕ್ರಿಯೆಯಲ್ಲಿ ಭಾರೀ ಲೋಪದೋಷಗಳಿರುವುದನ್ನು ಗಮನಿಸಿದ ಅಂದಿನ ತಹಶೀಲ್ದಾರ್ ಎನ್.ವಿ. ನಟೇಶ್ ಅವರು 2020 ರಲ್ಲಿಯೇ ಸಕಲೇಶಪುರ ಉಪ ವಿಭಾಗಾಧಿಕಾರಿಗೆ ತನಿಖೆ ನಡೆಸುವಂತೆ ಪತ್ರ ಬರೆದಿದ್ದರು.
ಇದರನ್ವಯ ಪರಿಶೀಲನೆ ನಡೆಸಿದ ಸಕಲೇಶಪುರದ ಅಂದಿನ ಉಪ ವಿಭಾಗಾಧಿಕಾರಿ (ಎಸಿ) ಪ್ರತೀಕ್ ಭಾಯಲ್, 2016 ರಿಂದ 2022 ರವರೆಗಿನ ಅವಧಿಯಲ್ಲಿ ಬರೋಬ್ಬರಿ 1,430 ಜನರಿಗೆ ಒಟ್ಟು 2,750 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿರುವುದನ್ನು ಪತ್ತೆ ಹಚ್ಚಿದ್ದರು. ಈ ಕುರಿತು ಅವರು 2022ರ ಅಕ್ಟೋಬರ್ನಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸುದೀರ್ಘ ವರದಿ ಸಲ್ಲಿಸಿದ್ದರು.
ತನಿಖೆ ಚುರುಕುಗೊಳಿಸಿದ ಸಿಐಡಿ
ಉಪ ವಿಭಾಗಾಧಿಕಾರಿ ಪ್ರತೀಕ್ ಭಾಯಲ್ ನೀಡಿದ ವರದಿಯ ಆಧಾರದ ಮೇಲೆ 2024 ರಿಂದ ಸಿಐಡಿ ಪೊಲೀಸರು ಅಧಿಕೃತ ತನಿಖೆ ಆರಂಭಿಸಿದ್ದರು. ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಅಂದಿನ ತಹಶೀಲ್ದಾರ್ ಮಮತಾ ಅವರು ಅಧಿಕಾರಿಗಳು ಬಚ್ಚಿಟ್ಟಿದ್ದ ಸುಮಾರು 774 ಅಕ್ರಮ ಮಂಜೂರಾತಿಯ ಅರ್ಜಿಗಳನ್ನು ಪತ್ತೆ ಹಚ್ಚಿ ಸಿಐಡಿ ಪೊಲೀಸರಿಗೆ ಒಪ್ಪಿಸಿದ್ದರು. ಇದು ಪ್ರಕರಣಕ್ಕೆ ಮತ್ತಷ್ಟು ಬಲ ತಂದಿತು.
ಕೋರ್ಟ್ ಮೆಟ್ಟಿಲೇರಿದ್ದ ಆರ್ಟಿಐ ಕಾರ್ಯಕರ್ತ
ಈ ಬೃಹತ್ ಹಗರಣದ ವಿರುದ್ಧ ಕೋಲಾರದ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಸಿ. ರಾಜಣ್ಣ ಎಂಬುವವರು 2023ರಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಶಾಸಕ ಕೆ.ಎಸ್. ಲಿಂಗೇಶ್, ಸಮಿತಿ ಸದಸ್ಯರಾಗಿದ್ದ ಜಿ.ಕೆ. ಕುಮಾರ್, ಶಾಲಿನಿ ಮೋಹನ್, ಟಿ.ಆರ್. ರಮೇಶ್, ವರ್ವತೇಗೌಡ, ಎಂ.ಆರ್. ಚೇತನ್, ಈಶ್ವರಪ್ರಸಾದ್, ಎಸ್.ಎನ್. ಲಿಂಗೇಶ್, ರಂಗನಾಥ್, ಭಾಗ್ಯಮ್ಮ ಹಾಗೂ ವಿವಿಧ ಅವಧಿಯಲ್ಲಿ ತಹಶೀಲ್ದಾರರಾಗಿ ಕೆಲಸ ಮಾಡಿದ್ದ ಬಿ.ಎ. ಜಗದೀಶ್, ಎಚ್.ಎಸ್. ಪರಮೇಶ್, ಜೆ. ಉಮೇಶ್, ಬಿ.ಎಸ್. ಪುಟ್ಟಶೆಟ್ಟಿ, ಯು.ಎಂ. ಮೋಹನ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ದೂರಿನ ಬೆನ್ನಲ್ಲೇ ಸಮಿತಿಯ ಕೆಲವು ಸದಸ್ಯರು ಹಾಗೂ ತಹಶೀಲ್ದಾರರು 2023ರಲ್ಲೇ ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸಮಿತಿಯ ಮುಖ್ಯಸ್ಥರಾಗಿದ್ದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಇದನ್ನೇ ಕಾಯುತ್ತಿದ್ದ ಸಿಐಡಿ ಅಧಿಕಾರಿಗಳು ಶುಕ್ರವಾರ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿ ಮಾಜಿ ಶಾಸಕ ಸೇರಿದಂತೆ ಇಡೀ ಜಾಲವನ್ನು ವಶಕ್ಕೆ ಪಡೆದಿದ್ದಾರೆ. ಈ ಬಂಧನ ಜಿಲ್ಲಾ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.