28/05/2022
ಈ ನಾಡು ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರೂ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಹಾಗೂ ಮಹಿಳೆಯರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಲು ತಮ್ಮ ಜೀವಿತದ ಉದ್ದಕ್ಕೂ ದುಡಿದ ಧೀಮಂತ ಮಹಿಳೆ ಯಶೋಧರಮ್ಮ ದಾಸಪ್ಪ. ಇವರು ಕೆ.ಎಚ್.ರಾಮಯ್ಯನವರು ಮತ್ತು ರೇವಮ್ಮನವರ ಮೊದಲ ಪುತ್ರಿ. ರಾಮಯ್ಯನವರು ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಗಳ ಸಂಸ್ಥೆಯ ವಿಶೇಷಾಧಿಕಾರಿ, ಸಹಕಾರ ಸಂಘಗಳ ರಿಜಿಸ್ಟ್ರಾರ್ ಆಗಿದ್ದವರು. "ಸಹಕಾರ ಸಂಘಗಳ ಪಿತಾಮಹ" ಎಂಬ ಕೀರ್ತಿವಂತರು; ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ವಿವೇಕಾನಂದ ಅವರಿಂದ ಪ್ರೇರಣೆ ಪಡೆದಿದ್ದ ರಾಮಯ್ಯನವರು ತಮ್ಮ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಧೀಮಂತೆ, ಧೈರ್ಯಶಾಲಿಯಾಗುವಂತೆ ನೋಡಿಕೊಂಡರು.
ಯಶೋಧರಮ್ಮ ಅವರು ಹುಟ್ಟಿದ್ದು 28.5.1905. ರಾಮಯ್ಯನವರು ಬುದ್ಧನ ಪತ್ನಿಯ ಹೆಸರನ್ನು ತಮ್ಮ ಮಗಳಿಗೆ ಇಟ್ಟರು.
4.3.1926ರಂದು, ಕೊಡಗಿನ ನ್ಯಾಯಾಧೀಶರಾಗಿದ್ದ ರಾವ್ ಬಹದ್ದೂರ್ ಚನ್ನಯ್ಯನವರ ಕಾನೂನು ಪದವೀಧರ ಪುತ್ರ ಎಚ್.ಸಿ.ದಾಸಪ್ಪನವರೊಂದಿಗೆ ಯಶೋಧರಮ್ಮ ಅವರ ವಿವಾಹವಾಯಿತು. ಇಬ್ಬರೂ ಅತ್ಯುತ್ತಮ ವಾಕ್ಚಾತುರ್ಯವುಳ್ಳವರು, ವಾಗ್ಮಿಗಳು. ದೇಶವು ಸ್ವತಂತ್ರವಾಗಬೇಕು ಎಂಬ ಹಂಬಲವಿದ್ದವರು. ಹೀಗಾಗಿ ಇಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಮೈಸೂರು ಸಂಸ್ಥಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯ ಅಂಗವಾಗಿ ನಡೆದ 1938ರ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಇಬ್ಬರೂ ಬಂಧನಕ್ಕೆ ಒಳಗಾದರು. ಆದರೆ ಅಂದು ಪುರುಷ ಹೋರಾಟಗಾರರ ಬಂಧನವಾದಾಗ ಧ್ವಜ ಸತ್ಯಾಗ್ರಹವು ನಿಲ್ಲದಂತೆ ನೋಡಿಕೊಂಡವರು ಯಶೋಧರಮ್ಮ ಮತ್ತು ಅವರ ತಂಡದ ಸದಸ್ಯರು. ಅವರ ಧೈರ್ಯ ಮತ್ತು ಸಮಯಸ್ಫೂರ್ತಿಯಿಂದ ಧ್ವಜ ಸತ್ಯಾಗ್ರಹವು ಯಶಸ್ವಿಯಾಯಿತು.
ಯಶೋಧರಮ್ಮ ಅವರದು ಉಜ್ವಲವಾದ ಬದುಕು. ಅವರು ಮೈಸೂರು ಪುರಸಭೆಯ ಮೊದಲ ಚುನಾಯಿತ ಸದಸ್ಯರು; ಮೈಸೂರು ನ್ಯಾಯ ವಿಧಾಯಕ ಸಭೆಯ ಮೊದಲ ಚುನಾಯಿತ ಸದಸ್ಯರು; ಮೈಸೂರು ಪ್ರದೇಶ ಕಾಂಗ್ರೆಸ್ ಪಕ್ಷದ ಮೊದಲ ಮಹಿಳಾ ಅಧ್ಯಕ್ಷರು; ಮೈಸೂರು ಸರ್ಕಾರದ ಮಂತ್ರಿಮಂಡಲದ ಮೊದಲ ಮಹಿಳಾ ಸಚಿವೆ. ಹೀಗೆ ಹಲವು ಪ್ರಥಮಗಳ ಮೊದಲ ಸಾಧಕಿ ಅವರು.
ಮಹಾತ್ಮ ಗಾಂಧಿಯವರ ಪ್ರಭಾವದಿಂದಾಗಿ ಅವರು ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡರು. ತಮ್ಮ ಒಡವೆ, ಆಸ್ತಿಯನ್ನು ಕಾಂಗ್ರೆಸ್ ಪಕ್ಷ ಮತ್ತು ಸ್ವಾತಂತ್ರ್ಯ ಚಳವಳಿಗೆ ನೀಡಿದರು. ಯಶೋಧರಮ್ಮ ದಾಸಪ್ಪ ದಂಪತಿಗಳು ಆರು ತಿಂಗಳ ಕಾಲ ಗಾಂಧಿಯವರ ವಾರ್ಧಾ ಸೇವಾಗ್ರಾಮದಲ್ಲಿ ತಮ್ಮ ಇಬ್ಬರು ಚಿಕ್ಕ ಮಕ್ಕಳ ಸಹಿತ ಕಠಿಣ ಸೇವಾಕಾರ್ಯದಲ್ಲಿ ತೊಡಗಿದರು; ಹಾಗೂ ಸೇವಾದೀಕ್ಷೆ ಪಡೆದರು. ಕಸ್ತೂರಬಾ ಗಾಂಧಿ ಅವರ ನಿಧನರಾದ ನಂತರ ಅವರ ಹೆಸರಲ್ಲಿ ಸ್ಥಾಪನೆಯಾದ ಕಸ್ತೂರಬಾ ಗಾಂಧಿ ಪ್ರತಿಷ್ಠಾನದ ಮೈಸೂರು ಶಾಖೆಯ ಪ್ರತಿನಿಧಿಯಾಗಿ ಯಶೋಧರಮ್ಮ ಆಯ್ಕೆ ಆದರು. ಅರಸೀಕೆರೆ ಸಮೀಪದಲ್ಲಿ 86 ಎಕರೆ ಭೂಮಿಯನ್ನು ಪಡೆದು ಅಲ್ಲಿ ಕಸ್ತೂರಬಾ ಆಶ್ರಮ ಸ್ಥಾಪಿಸಿ, ಗಾಂಧಿಯವರ ಆಶಯದಂತೆ ಕೊನೆಯವರೆಗೂ ಅಲ್ಲಿಯೇ ನೆಲೆಸಿದರು. ಪರಿಶಿಷ್ಟ ಜಾತಿ, ಪಂಗಡಗಳ ಜನರ ಏಳಿಗೆಯ ಕನಸು ಕಂಡ ಅವರು ದಲಿತ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು. ತಮ್ಮ ಮಗನಿಗೆ ಆಶ್ರಮದ ಅನಾಥ ಹೆಣ್ಣಿನ ಜೊತೆಗೆ ಮದುವೆ ಮಾಡಿದ ಆದರ್ಶ ವ್ಯಕ್ತಿ ಅವರು.
1962ರಲ್ಲಿ ಮೈಸೂರು ಸರ್ಕಾರದ ಸಮಾಜ ಕಲ್ಯಾಣ ಮಂತ್ರಿಯಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಏಳಿಗೆಗಾಗಿ ಹಲವು ಯೋಜನೆಯನ್ನು ಜಾರಿಗೊಳಿಸಲು ಶ್ರಮಿಸಿದರು.
ಆದರೆ ಮಹಾತ್ಮ ಗಾಂಧಿಯವರ ಇಚ್ಛೆಗೆ ವಿರುದ್ಧವಾಗಿ ಸರ್ಕಾರ ಮದ್ಯಪಾನ ನಿಷೇಧ ಕಾಯಿದೆಯನ್ನು ರದ್ದು ಮಾಡಿದಾಗ ತಮ್ಮದೇ ಸರ್ಕಾರದ ಜನವಿರೋಧಿ ನಿರ್ಧಾರದ ವಿರುದ್ಧ ಪ್ರತಿಭಟಿಸಿ ರಾಜೀನಾಮೆ ನೀಡಿ ಮಂತ್ರಿ ಮಂಡಲದಿಂದ ಹೊರನಡೆದರು. ಜನರ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಕಾರಣಕ್ಕೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಮತ್ತು ಕೊನೆಯ ವ್ಯಕ್ತಿ ಅವರು. ಆದರೆ ಅಧಿಕಾರ ಸ್ಥಾನದಿಂದ ದೂರವಾದರೂ ಸಮಾಜ ಸೇವೆಯಿಂದ ವಿಮುಖರಾಗದೆ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದರು. ಇವರ ಜನಪರ ಕಾಳಜಿ, ಸೇವಾಕಾರ್ಯಗಳನ್ನು ಗುರುತಿಸಿ ಭಾರತ ಸರ್ಕಾರವು ದೇಶದ ಮೂರನೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಿತು. ಮೂಢನಂಬಿಕೆ ತೊಲಗಬೇಕಾದರೆ ಜನರಿಗೆ ಶಿಕ್ಷಣ ನೀಡಬೇಕು ಎಂಬ ಕಾರಣಕ್ಕೆ ರಾಜ್ಯದ ಅನೇಕ ಕಡೆ ಸೇವಾಕೇಂದ್ರಗಳನ್ನು ಸ್ವಂತ ಹಣದಿಂದ ಸ್ಥಾಪಿಸಿದ ನಿಸ್ವಾರ್ಥ ಮಹಿಳೆ ಯಶೋಧರಮ್ಮ. ಇಂತಹ ಧೀರೋದಾತ್ತ, ನಿಸ್ವಾರ್ಥ, ಜನಪರ ಕಾಳಜಿಯ ಯಶೋಧರಮ್ಮ ದಾಸಪ್ಪ ಅವರು ನಮ್ಮ ಸಮಾಜದ ಆಸ್ತಿ, ನಮ್ಮ ಹೆಮ್ಮೆ. ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕವಾದ ನಮನಗಳನ್ನು ಸಲ್ಲಿಸುತ್ತೇವೆ.