16/01/2026
#ಉತ್ತರ_ಕನ್ನಡ ನಿನಗೆ ಈ ಹೋರಾಟಗಳು ಬೇಕೇ?
ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮರ ಸೃಷ್ಟಿಯಲ್ಲಿ ನಮ್ಮ ಉತ್ತರಕನ್ನಡ ಜಿಲ್ಲೆಯ ಬಹುಪಾಲು ಸೇರಿದೆ. ಆದಕಾರಣ ಈ ಭಾಗಕ್ಕೆ ಯಾವ ಕಾಲದಲ್ಲೂ ಆತಂಕ ಇಲ್ಲ ಎನ್ನುವ ಮಾತು ಬಹಳ ಹಿಂದಿನಿಂದನು ನಾವು ಕೇಳುತ್ತ ಬಂದಿದ್ದೇವೆ. ಇತ್ತೀಚಿನ ಬೆಳವಣಿಗೆಗಳಲ್ಲಿ ಎಲ್ಲಾ ಹೊಸ ಹೊಸ ಯೋಜನೆಗಳಿಗೆ ಬಲಿಪಶು ಆಗುತ್ತಾ ಇರುವುದು ಇದೆ ಉತ್ತರ ಕನ್ನಡ ಎನ್ನುವದು ಆತಂಕಕಾರಿ ಬೆಳವಣಿಗೆ ಆಗಿದೆ. ಇದಕ್ಕೆ ಕಾರಣ ಕೇಂದ್ರ, ಹಾಗೂ ರಾಜ್ಯಸರ್ಕಾರಗಳು ಅನುಷ್ಠಾನಕ್ಕೆ ತರುತ್ತ ಇರುವ 3 ಮಹತ್ವದ ಯೋಜನೆಗಳು :
1) ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ (ಸಧ್ಯಕ್ಕೆ ತಡೆಯಲ್ ಪಟ್ಟ ಯೋಜನೆ )
2) ಬೇಡ್ತಿ- ವರದಾ ನದಿ ಜೋಡಣೆ ಯೋಜನೆ
3) ಅಘನಾಶಿನಿ- ವೇದಾವತಿ ನದಿ ಜೋಡಣೆ
ಇವು ಮೂರು ಯೋಜನೆಗಳಿಗೂ ಜಿಲ್ಲೆಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇಲ್ಲಿಯವರೆಗೆ ಉತ್ತರ ಕನ್ನಡ ಏನನ್ನು ಕೊಟ್ಟಿದೆ, ಏನನ್ನು ಪಡೆದಿದೆ?
1) ಈಗಾಗಲೇ ಕೈಗಾ ಅಣುಸ್ಥಾವರ ಘಟಕಕ್ಕೆ ಜಾಗ, ಜೀವ ಎಲ್ಲವನ್ನೂ ಕೊಟ್ಟಿದ್ದು ಆಗಿದೆ. ಇದರ ವ್ಯತಿರಿಕ್ತ ಪರಿಣಾಮ ಸುತ್ತಮುತ್ತಲಿನ ಪರಿಸರದ ಜನ ಅನುಭವಿಸುತ್ತ ಇರುವುದು ಅಲ್ಲದೆ, ಬಹಳಷ್ಟು ವಿರೋಧದ ನಡುವೆ ಆದ ಯೋಜನೆಯಿಂದ ಪರಿಸರ ಕೂಡ ಬಹಳ ಸಂಕಟ ಪಡುವಂತೆ ಆಗಿದೆ.
2) ಜಲ ವಿದ್ಯುತ್ ಯೋಜನೆಗಳಿಗೆ ಜಾಗವನ್ನು ಕೊಟ್ಟಿದ್ದು ಆಗಿದೆ. ಇದರಿಂದ ನಾವು ದೊಡ್ಡ ಪ್ರಮಾಣದ ಅರಣ್ಯ ಸಂಪತ್ತನ್ನು ಕಳೆದುಕೊಂಡದ್ದು ಆಗಿದೆ.
3) ಇನ್ನೂ ಚಿಕ್ಕಪುಟ್ಟ ಯೋಜನೆಗಳು ನಮ್ಮಲ್ಲಿ ಬಹಳಷ್ಟು ಆಗಿದ್ದು ಇದರಿಂದ ಇಲ್ಲಿನ ಜನಕ್ಕೆ ಆಗಿರುವ ಅನುಕೂಲ ಬಹಳ ಕಡಿಮೆ ಎಂದು ಹೇಳಬಹುದಾಗಿದೆ.
ಇನ್ನೂ ಉತ್ತರಕನ್ನಡ ಜಿಲ್ಲೆ ಪಡೆದಿದ್ದು ಏನು ಎಂದು ಕೇಳಿದರೆ:
1) ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿ ಇರುವ ಈ ಜಿಲ್ಲೆಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಂದು ಉತ್ತಮ ಗುಣಮಟ್ಟದ ಮಲ್ಟಿಸ್ಪೆಷಲಿಟಿ ಆಸ್ಪತ್ರೆ ಇಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿ ಹಿಡಿದು ಬೇರೆ ಜಿಲ್ಲೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಭಾಗ್ಯ ಈ ಜಿಲ್ಲೆಯ ಜನತೆಯದ್ದು.
2) ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನ ಅದೆಷ್ಟೋ ವರ್ಷದಿಂದ ತೋರಿಸುತ್ತ ಇರುವ ಇಲ್ಲಿನ ಜನತೆಗೆ ಉನ್ನತ ವ್ಯಾಸಂಗಕ್ಕೆ ಕಾಲೇಜು ವ್ಯವಸ್ಥೆ ಇಲ್ಲ.
3) ಹೊರ ರಾಜ್ಯ, ಹೊರ ದೇಶದಲ್ಲೂ ವಾಸವಿರುವ ಈ ಜಿಲ್ಲೆಗೆ ಏರ್ಪೋರ್ಟ್ ವ್ಯವಸ್ಥೆ ಇಲ್ಲ.
ಇಂತಹ ಅನೇಕ ಬೇಡಿಕೆಗಳು ಇದುವರೆಗೂ ಯಾವ ಸರ್ಕಾರಕ್ಕೂ ಕಾಣಿಸಲೇ ಇಲ್ಲ ಎನ್ನುವುದು ದುರಂತ. 6 MLA ಗಳನ್ನು ಒಳಗೊಂಡ ಈ ಜಿಲ್ಲೆಯ ಯಾವ MLA ಗಳಿಗೂ ಇಲ್ಲಿನ ಜನರ ಕೂಗು ಇದುವರೆಗೂ ಕೇಳಿಸಿದಂತೆ ಅನ್ನಿಸುವುದೇ ಇಲ್ಲ. ಇನ್ನೂ ಜನರ ಕೂಗು ಕೇಳಿಸದಂತೆ ಕಿವಿ ಮುಚ್ಚಿ ಕುಳಿತುಕೊಂಡು ಅಧಿಕಾರ ಅನುಭವಿಸಿದ ಎಷ್ಟೋ ಎಂಪಿಗಳನ್ನು ಪಡೆದ ಹಿರಿಮೆ ನಮ್ಮ ಜಿಲ್ಲೆಯದ್ದು ಎಂದು ಹೇಳಬಹುದು. ಇವೆಲ್ಲವನ್ನು ಗಮನಿಸಿದರೆ ಉತ್ತರಕನ್ನಡಕ್ಕೆ ಈ ಹೋರಾಟ ಅಗತ್ಯವಿದೆ ಎಂದು ಅನ್ನಿಸುತ್ತದೆ.
ಈಗ ಮೇಲೆ ಹೇಳಿದ ಹೊಸ 3 ಯೋಜನೆಯ ವಿರುದ್ಧ ಹೋರಾಟದ ಕುರಿತು ಹೇಳುವುದಾದರೆ, ಇದಕ್ಕೆ ಮೇಲ್ ನೋಟಕ್ಕೆ ಬಹಳಷ್ಟು ರಾಜಕಾರಣಿಗಳು ವಿರೋಧಿಸಿದ್ದರು, ಅನೇಕ ಪರಿಸರವಾದಿಗಳು, ಸ್ವಾಮೀಜಿಗಳು ಎಲ್ಲರೂ ಸೇರಿ ಹೋರಾಟ ನಡೆಸುತ್ತ ಇರುವುದು ಜನತೆಯ ಭಾಗ್ಯ ಮತ್ತೂ ಯೋಜನೆ ಅನುಷ್ಠಾನಕ್ಕೆ ಬಾರದಂತೆ ಆಗುವುದು ಎನ್ನುವ ಆಶಯ ಇಲ್ಲಿನ ಜನತೆಯದ್ದು. ಆದರೆ, ಈ ರಾಜಕಾರಣಿಗಳು, ಹೋರಾಟಗಾರರು, ಪರಿಸರವಾದಿಗಳು ಎಷ್ಟರ ಮಟ್ಟಿಗೆ ನಂಬಿಕೆಗೆ ಅರ್ಹರು ಎನ್ನುವುದು ಪ್ರಶ್ನೆಯಾಗಿ ಉಳಿಯುತ್ತದೆ? ಯಾಕಂದರೆ ಹಿಂದಿನ ಅನೇಕ ಹೋರಾಟಗಳಲ್ಲಿ ಇವರ ಭ್ರಷ್ಟತೆಯ ಕುರುಹು ಅಲ್ಲಲ್ಲಿ ಜನತೆಗೆ ಕಾಣಿಸಿದ್ದು ಇರುತ್ತದೆ.
ಇವರನ್ನು ನಂಬಿ ಹೋರಾಟಕ್ಕೆ ಬೀದಿಗೆ ಇಳಿಯಲು ಸಿದ್ದವಾಗಿರುವ ಜನತೆಯನ್ನೂ ನಡು ನೀರಿನಲ್ಲಿ ಕೈಬಿಟ್ಟು ತಾವು ಮಾತ್ರ ಎಲ್ಲಾ ಲಾಭಕ್ಕೂ ಪಾಲುಧಾರರಾಗಿ ಉಳಿಯದೆ ಈ ಯೋಜನೆಗಳನ್ನುತಡೆಯಲು ಸ್ವಾಮೀಜಿಗಳಂತೆ, ಜನಸಾಮಾನ್ಯರಂತೆ ಪ್ರಾಮಾಣಿಕ ಪ್ರಯತ್ನ ನಡೆಸಲಿ ಈ ಎಲ್ಲಾ ಹೋರಾಟದ ನಾಯಕರುಗಳು ಎನ್ನುವ ಕಳಕಳಿಯೊಂದಿಗೆ ಈ ಬರಹ 🙏🏻..
ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ, ಮೂರೂರು, ಕುಮಟಾ
#ಅಘನಾಶಿನಿಉಳಿಸಿ #ಶರಾವತಿಉಳಿಸಿ #ಬೇಡ್ತಿಉಳಿಸಿ
#ನಮ್ಮಉತ್ತರಕನ್ನಡಉಳಿಸಿ ಉತ್ತರ ಕನ್ನಡದ ಜನತೆಗೆ ಬದುಕಲು ಬಿಡಿ 🙏🏻...