29/05/2026
ಎಸ್. ಎಂ. ಕೃಷ್ಣ ರವರ 94 ನೇ ಜನ್ಮ ದಿನೋತ್ಸವ ಮತ್ತು ಸಂಸ್ಮರಣೆ ಹಾಗೂ ಎಸ್. ಎಂ. ಕೃಷ್ಣ ಆಡಳಿತ ಸೇವಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭ.
ಪದ್ಮಭೂಷಣ ದಿವಂಗತ S. M. Krishna ಅವರ 94ನೇ ಜನ್ಮ ದಿನೋತ್ಸವ ಮತ್ತು ಸಂಸ್ಮರಣೆ ಅಂಗವಾಗಿ ಮದ್ದೂರು ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಚುಂಚಶ್ರೀ ಗೆಳೆಯರ ಬಳಗ ಹಾಗೂ ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ “ಎಸ್. ಎಂ. ಕೃಷ್ಣ ಆಡಳಿತ ಸೇವಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭ” ಅತ್ಯಂತ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ದಿವಂಗತ ಎಸ್. ಎಂ. ಕೃಷ್ಣ ಅವರು ಈ ನಾಡು ಹಾಗೂ ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ರೂಪುಗೊಳಿಸಿದ ದೂರದೃಷ್ಟಿಯ ನಾಯಕತ್ವ ಅವರದ್ದಾಗಿತ್ತು ಎಂದು ಹೇಳಿದರು.
ಅದೇ ವೇಳೆ, ಎಸ್. ಎಂ. ಕೃಷ್ಣ ಆಡಳಿತ ಸೇವಾರತ್ನ ಪ್ರಶಸ್ತಿಯನ್ನು ಶಾಸಕ ಕೆ. ಎಂ. ಉದಯ್ ಅವರಿಗೆ ಪ್ರದಾನ ಮಾಡಿರುವುದು ಅತ್ಯಂತ ಸೂಕ್ತ ಹಾಗೂ ಪ್ರಶಂಸನೀಯ ನಿರ್ಧಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಸಾಮಾನ್ಯ ರೈತನ ಮಗನಾಗಿ ರಾಜಕೀಯ ಪ್ರವೇಶಿಸಿ, ಜನಪರ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ರಿಯಾಶೀಲ ಶಾಸಕರಾಗಿ ಹೊರಹೊಮ್ಮಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿ, ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಅಜಾತಶತ್ರು ನಾಯಕರೆಂದರು. ಮಾಹಿತಿ ತಂತ್ರಜ್ಞಾನ, ಐಟಿ-ಬಿಟಿ ಕ್ಷೇತ್ರ, ಯಶಸ್ವಿನಿ ಯೋಜನೆ, ಪಹಣಿ ವ್ಯವಸ್ಥೆ, ಬೆಂಗಳೂರು–ಮೈಸೂರು ಹೆದ್ದಾರಿ ಅಭಿವೃದ್ಧಿ ಸೇರಿದಂತೆ ರಾಜ್ಯದ ಸಮಗ್ರ ಬೆಳವಣಿಗೆಗೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಮದ್ದೂರು ಕ್ಷೇತ್ರದ ಅಭಿವೃದ್ಧಿಗೂ ಎಸ್. ಎಂ. ಕೃಷ್ಣ ಅವರು ವಿಶೇಷ ಕಾಳಜಿ ವಹಿಸಿ, ಅನೇಕ ಸರ್ಕಾರಿ ಕಟ್ಟಡಗಳು, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದರು ಎಂದು ಸ್ಮರಿಸಿದರು. ಶಾಸಕ ಕೆ. ಎಂ. ಉದಯ್ ಕೂಡಾ ಅಭಿವೃದ್ಧಿ ಪರ ಚಿಂತನೆಗಳೊಂದಿಗೆ ಕೆಮ್ಮಣ್ಣು ನಾಲೆ ಅಭಿವೃದ್ಧಿ, ಸೂಳೆಕೆರೆ ಅಭಿವೃದ್ಧಿ, ಪೇಟೆ ಬೀದಿ ಅಗಲೀಕರಣ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಕೈಗೊಂಡು ಎಸ್. ಎಂ. ಕೃಷ್ಣ ಅವರ ಅಭಿವೃದ್ಧಿ ದಾರಿಯಲ್ಲೇ ಸಾಗುತ್ತಿದ್ದಾರೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ, ಎಸ್. ಎಂ. ಕೃಷ್ಣ ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ತನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. ಅವರು ಮಿತಭಾಷಿಯಾಗಿದ್ದರೂ ಸಾಧನೆಯಲ್ಲಿ ಅಪಾರರಾಗಿದ್ದರು. ಅವರ ಶಿಸ್ತು, ಸಮಯಪ್ರಜ್ಞೆ ಮತ್ತು ಆಡಳಿತ ವೈಖರಿ ಎಲ್ಲರಿಗೂ ಮಾದರಿಯಾಗಿದೆ.
ಈ ಸಂದರ್ಭದಲ್ಲಿ “ಮದ್ದೂರು ತಾಲ್ಲೂಕಿನ ಚುನಾಯಿತ ಜನಪ್ರತಿನಿಧಿಗಳು ಹಾಗೂ ಶಿಕ್ಷಣ – ಒಂದು ಮುನ್ನೋಟ” ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣ, ಹಿರಿಯ ಸಾಹಿತಿಗಳಾದ ಜಯಪ್ರಕಾಶ್ ಗೌಡ, ತೈಲೂರು ವೆಂಕಟಕೃಷ್ಣ, ನಿವೃತ್ತ ಪ್ರಾಂಶುಪಾಲ ಶಂಕರಗೌಡ, ಸುರೇಶ್ ಕಂಠಿ, ರವಿಕುಮಾರ್, ರಾಣಿ ಐಶ್ವರ್ಯ ಬಿಲ್ಡರ್ ಹಳ್ಳಿಕೆರೆ ಸತೀಶ್, ಕದಲೂರು ರಾಮಕೃಷ್ಣ ಸೇರಿದಂತೆ ಹಲವಾರು ಗಣ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.