02/01/2021
ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕದ ನೆಲ, ಜಲ ಭಾಷೆ, ಇತಿಹಾಸ, ಸಂಸ್ಕೃತಿ ಮತ್ತು ಆಚರಣೆಗಳ ಅಧ್ಯಯನ ಮಾಡಲು ಯಾವುದೇ ರೀತಿಯ ಎಲ್ಲೆಯಿಲ್ಲದ ಒಂದು ಮಹಾಮನೆ. ಅದರಲ್ಲಿ ಯಾವುದೇ ಜಿಲ್ಲೆಯ ಗಡಿಗಳಿಲ್ಲದೆ ಬೀದರಿನಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದವರೆಗಿನ ಎಲ್ಲಾ ಧರ್ಮ, ಜಾತಿ-ಜನಾಂಗದ ಎಲ್ಲೆಯನ್ನು ಮೀರಿ ಕರ್ನಾಟಕದ ನೆಲ-ಜಲ,ಭಾಷೆ,ಇತಿಹಾಸ ಮತ್ತು ಪುರಾತತ್ವ, ಜಾನಪದ, ಶಾಸನ, ಸಾಹಿತ್ಯ ಮೊದಲಾದ ವಿಚಾರಗಳನ್ನು ಕುರಿತು ಆಳವಾಗಿ ಮತ್ತು ಸಮಗ್ರವಾಗಿ ಅಧ್ಯಯನ ಮಾಡಲು ಇರುವ ಏಕೈಕ ಅಧ್ಯಯನ ಸಂಸ್ಥೆ. ಇದು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಚಂದ್ರಶೇಖರ ಕಂಬಾರರಂತಹ ಹಲವಾರು ಮಹಾನ್ ತಪಸ್ವಿಗಳ ಕನಸಿನ ಕೂಸು. ಆದರೆ ಇಂದು ಕರ್ನಾಟಕ ರಾಜ್ಯ ಸರ್ಕಾರವು ಜಾತಿ ಪೀಠಗಳ ಅಭಿವೃದ್ಧಿ ರಚನೆಯನ್ನು ಮಾಡಿ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡುತ್ತಿದೆ. ಆದರೆ ಬಡವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿಶ್ವವಿದ್ಯಾಲಯವನ್ನು ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ದಿವಾಳಿತನದತ್ತ ಕೊಂಡೊಯ್ಯುತ್ತಿರುವುದನ್ನು ಕಂಡೂ ಕಾಣದಂತಿರುವುದನ್ನು ನೋಡಿದರೆ ಜನಸಾಮಾನ್ಯರು, ಕನ್ನಡದ ಉದ್ಧಾರಕರು,ನಟಮಹಾಶಯರು, ಕನ್ನಡ ಭಾಷಾಭಿಮಾನಿಗಳು ಯಾರೂ ಕೂಡ ಅದರ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ.
ಆದರೆ ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿತಿಯು ಬಿಕ್ಷೆ ಬೇಡುವ ಪರಿಸ್ಥಿತಿಗೆ ತಂದ ಮಹಾನುಭಾವರು ನಮ್ಮ ಸತ್ಪ್ರಜೆಗಳು.