20/10/2021
ಬಂಟ್ವಾಳ : ಬಿರುವೆರ್ ಕುಡ್ಲ ಮಹಾ ಸೇವಾ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ಮನೆಯ ಹಸ್ತಾಂತರ
ಸರಕಾರ ಮಾಡುವ ಕೆಲಸ ಬಿರುವೆರ್ ಕುಡ್ಲ ಮಾಡುತ್ತಿದೆ ನಳಿನ್ ಕುಮಾರ್ ಕಟೀಲ್ , ಕಷ್ಟ ಕಣ್ಣೀರಿನಲ್ಲಿರುವವರಿಗೆ ನೆರವು ನೀಡುವುದೇ ಭಗವಂತನ ಪೂಜೆಯಾಗಿದ್ದು,
ಬ್ರಹ್ಮಶ್ರೀ ನಾರಾಯಣ ಗುರುಗಳು ಕೂಡ ಇದನ್ನೇ ಪ್ರತಿಪಾದಿಸಿದ್ದರು. ಒಂದು ಸರಕಾರ ಮಾಡುವ ಕಾರ್ಯವನ್ನು ಬಿರುವೆರ್ ಕುಡ್ಲ ಮಾಡುತ್ತಿದೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಬಂಟ್ವಾಳ ಭಂಡಾರಿಬೆಟ್ಟಿನಲ್ಲಿ ಮಂಗಳೂರು ಫ್ರೆಂಡ್ಸ್ ಬಳ್ಳಾಲ್ ಬಾಗ್- ಬಿರುವೆರ್ ಕುಡ್ಲದ ಮಹಾ ಸೇವಾ ಯೋಜನೆ- ೨೦೨೧ ವತಿಯಿಂದ ನಿರ್ಮಿಸಲಾದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಲಿಂಗಪ್ಪ ಹಾಗೂ ಮೋಹಿನಿ ದಂಪತಿಯ ನೂತನ ಸುಸಜ್ಜಿತ ಮನೆಯನ್ನು ಹಸ್ತಾಂತರಿಸಿದರು.
ಸಣ್ಣ ವಯಸ್ಸಿನಲ್ಲೇ ಸಾಧನೆಯನ್ನು ಮಾಡಿದ ಉದಯ ಪೂಜಾರಿ ಬಲಿಷ್ಠ ಯುವ ಪಡೆಯನ್ನು ಕಟ್ಟಿಕೊಂಡು ಟೀಕೆಗಳಿಗೆ ಸೇವಾ ಕಾರ್ಯದ ಮೂಲಕವೇ ಉತ್ತರ ನೀಡುವ ಕಾರ್ಯ ಮಾಡುತ್ತಿದೆ. ನಾಲ್ಕು ಯುವಕರು ಸೇರಿದರೆ ಬಡವರಿಗೆ ಮನೆ ನಿರ್ಮಾಣವಾಗುತ್ತದೆ ಎಂಬುದನ್ನು ಬಿರುವೆರ್ ಕುಡ್ಲ ತೋರಿಸಿಕೊಟ್ಟಿದೆ. ಈ ಮನೆಯ ಶಾಶ್ವತ ಆಶೀರ್ವಾದ ಬಿರುವೆರ್ ಕುಡ್ಲದ ಮೇಲಿರುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿರುವೆರ್ ಕುಡ್ಲ ಸಂಘಟನೆಯು ಸಮಾಜಕ್ಕೆ ಹತ್ತಿರವಾಗುವ ಕಾರ್ಯ ಮಾಡುತ್ತಿದ್ದು, ಹಲವಾರು ಸೇವಾ ಕಾರ್ಯಗಳ ಮೂಲಕ ದುರ್ಬಲರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ವೇದಿಕೆಯಲ್ಲಿ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬಳ್ಳಾಗ್ ಬಾಗ್, ಬಿಜೆಪಿ ಮುಂದಾಳು ವಸಂತ ಪೂಜಾರಿ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.
ಬಿರುವೆರ್ ಕುಡ್ಲಕ್ಕೆ ನೆರವು ನೀಡಿದ ವೆಂಕಟೇಶ್ ಹಾಗೂ ಲಕ್ಷ್ಮಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ನೆರವು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸಂಘಟನೆಯ ಮುಂದಾಳು ನ್ಯಾಯವಾದಿ ಚಂದ್ರಶೇಖರ್ ನೆರವು ನೀಡಿದವರ ವಿವರ ನೀಡಿದರು. ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.