02/09/2026
ಸಿದ್ದರಾಮಯ್ಯನವರು ಮೌನದ ಮೊರೆ ಹೋಗಿರುವುದು ಇದೇ ಮೊದಲ ಬಾರಿ ಅಲ್ಲ.
2005ರ ಮೊದಲಾವಧಿಯಲ್ಲಿ ಸಿದ್ದರಾಮಯ್ಯನವರು ಇಂದಿನ ರೀತಿಯಲ್ಲಿಯೇ ಮೌನ ಧರಿಸಿ ಕೂತಿದ್ದರು.
ಅವರು ಮೌನ ಮುರಿದದ್ದು 2005ರ ಜುಲೈ 15ರಂದು ಹುಬ್ಬಳ್ಳಿಯಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ.
ಅದಾದ ಒಂದು ತಿಂಗಳ ಅವಧಿಯಲ್ಲಿಯೇ ದೇವೇಗೌಡರು ಸಿದ್ದರಾಮಯ್ಯನವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿದರು.
ಅಂತಿಮವಾಗಿ2006ರ ಜುಲೈ 22ರಂದು ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಆ ಕಾಲದ ಸಿದ್ದರಾಮಯ್ಯನವರ ಮೌನದ ಬಗ್ಗೆ ನಾನು ಪ್ರಜಾವಾಣಿಯಲ್ಲಿ ವಿಶ್ಲೇಷಣಾ ಲೇಖನ (30-06-2005)ಬರೆದಿದ್ದೆ.
ಸಿದ್ದರಾಮಯ್ಯನವರು ಈಗ ಮತ್ತೊಮ್ಮೆ ಮೌನಕ್ಕೆ ಜಾರಿರುವ ಬಗ್ಗೆ ನಡೆಯುತ್ತಿರುವ ಊಹಾಪೋಹಗಳ ನಡುವೆಯೇ ಭಾನುವಾರ ಹಿಂದುಳಿದ ಜಾತಿಗಳ ಸಮಾವೇಶ ನಡೆಯುತ್ತಿದೆ.
ಏನಿದರ ಉದ್ದೇಶ? ನನಗೂ ಗೊತ್ತಿಲ್ಲ.
#ಮೌನದ_ಬಂಗಾರಕ್ಕೆ_ಮೊರೆ
#ದಿನೇಶ್_ಅಮಿನ್_ಮಟ್ಟು
ಪ್ರಜಾವಾಣಿ ವಾರ್ತೆ:
(30-06-2005)
ನವದೆಹಲಿ: ಮಾತಿನ ಬೆಳ್ಳಿಗಿಂತಲೂ ಮೌನದ ಬಂಗಾರಕ್ಕೆ ಬೆಲೆ ಹೆಚ್ಚೆನ್ನುವುದು ಉಪಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ. ಅದಕ್ಕಾಗಿ ಯೇ ಅವರು ಇನ್ನಷ್ಟು ಕಾಲ 'ಬಂಗಾರ'ವನ್ನೇ ಧರಿಸಿಕೊಂಡು ಮುಂದುವರಿಯಲು ನಿರ್ಧರಿಸಿದ್ದಾರೆ. ಅವರು ಮೌನ ಒಡೆಯಬೇಕೆಂದು ನಿರೀಕ್ಷಿಸುವವರು ಇನ್ನಷ್ಟು ದಿನ ಕಾಯಬೇಕು.
ಸಿದ್ದರಾಮಯ್ಯ ಮತ್ತು ಗೌಡರ ನಡುವಿನ ಒಂದು ಸುತ್ತಿನ ದೃಷ್ಟಿಯುದ್ಧ ಮುಗಿದಿದೆ. ಮುಂದಿನ ಸುತ್ತು ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ದ ನಂತರ ಪ್ರಾರಂಭವಾಗಬಹುದು. ಈ ನಡುವಿನ ಅವಧಿಯಲ್ಲಿ ಇಬ್ಬರು ನಾಯಕರ ನಡುವಿನ ಸಂಬಂ ಧ ಸುಧಾರಣೆಯ ಪ್ರಯತ್ನದ ಯಶಸ್ಸು -ವೈಫಲ್ಯದ ಮೇಲೆ ಮುಂದಿನ ನಿರ್ಣಾಯಕ ಸುತ್ತಿನ ಪರಿಣಾಮ ಅವಲಂಬಿಸಿದೆ ಎನ್ನುತ್ತಾರೆ ಉಪಮುಖ್ಯಮಂತ್ರಿಗಳು ಬೆಂಬಲಿಗರೊಬ್ಬರು.
ಪಕ್ಷವನ್ನು ತ್ಯಜಿಸಿದರೆ ರಾಜಕೀಯ ಪ್ರತಿಕ್ರಿಯೆ ಏನಿರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಸಿದ್ದ ರಾಮಯ್ಯ ಈ ಸುತ್ತಿನ ದೃಷ್ಟಿಯುದ್ಧವನ್ನು ಬಳಸಿ ಕೊಂಡಂತಿದೆ. ಈ ಅನುಭವದಿಂದ ಕಲಿತ ಪಾಠವನ್ನು ಮುಂದೆ ಅವರು ಬಳಸಿಕೊಳ್ಳಬಹುದು.
ಪಕ್ಷವನ್ನು ತ್ಯಜಿಸಲೇಬೇಕಾಗಿ ಬಂದರೆ ಅವರ ಮುಂದೆ ಎರಡು ಆಯ್ಕೆಗಳಿವೆ. ಮೊದಲನೆಯದ್ದು ಸ್ವಂತ ಪಕ್ಷದ ಸ್ವಾಪನೆ. ಅನಂತರ ಇತರ ಪಕ್ಷಗಳ ಜತೆ ಮೈತ್ರಿ, ಅಪಾರ ಶ್ರಮ ಮತ್ತು ಸಂಪನ್ಮೂಲವನ್ನು ಬೇಡುವ ಈ ಸಾಹಸದ ಬಗ್ಗೆ ಸಿದ್ದರಾಮಯ್ಯನವರಲ್ಲಿ ಹಿಂಜರಿಕೆಯಿದೆಯಂತೆ. ಅವರು ಆಸಕ್ತಿ, ತೋರುತ್ತಿರುವ ಹಿಂದುಳಿದ ದಲಿತ-ಅಲ್ಪಸಂಖ್ಯಾತ ರ ಸಮ್ಮೇಳನಗಳ ಹಿಂದೆ ಈ ಆಯ್ಕೆಯ ಬಗ್ಗೆ ಜನರ ಪ್ರತಿಕ್ರಿಯೆ ತಿಳಿದುಕೊಳ್ಳುವ ಉದ್ದೇಶ ಇರಬಹುದು.
ಎರಡನೇ ಆಯ್ಕೆ ಬೇರೆ ಪಕ್ಷಗಳಿಗೆ ಸೇರುವುದು. ಆ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಇಲ್ಲ. ಅದರಲ್ಲಿ ಈಗ ಮೊದಲ ಸ್ಥಾನದಲ್ಲಿರುವುದು ಆರ್ಜೆಡಿ, ಲಾಲುಪ್ರಸಾದ್ ಯಾದವ್ ಖುದ್ದಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಸಿದ್ದರಾಮಯ್ಯನವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಈ ಸಂಬಂಧ ಕುದುರಿಸ ಲು ಪ್ರಯತ್ನಿಸುವವರು ಲಾಲು ಅವರಿಗೆ ಆಪ್ತರಾದ ದೇವೇಗೌಡರ ಕಡು ವಿರೋಧಿ ಮಾಜಿ ಸಂಸದ ಕೋದಂಡರಾಮಯ್ಯ, ಆದರೆ ಕಾರ್ಯದ ಒತ್ತಡದಿಂದ ಲಾಲು ಅವರಿಗೆ ಇಂದು ಭೇಟಿಯಾಗಲು ಸಾಧ್ಯವಾಗಲಿಲ್ಲ.
ಬಿಎಸ್ಪಿ ಬೇಡವೇ?: ಜೆಡಿ (ಎಸ್) ತ್ಯಜಿಸುವು ದಾದರೆ ಬಿಎಸ್ ಪಿಗೆ ಯಾಕೆ ಹೋಗಬಾರದು ಎನ್ನು ವ ಬಗ್ಗೆಯೂ ಅವರ ಬೆಂಬಲಿಗರಲ್ಲಿ ಚರ್ಚೆ ನಡೆದಿದೆ. ಈ ಚಿಂತನೆಯ ಸೂತ್ರಧಾರರು ಸಿದ್ದರಾಮಯ್ಯನವರ ಇನ್ನೊಬ್ಬ ಕಟ್ಟಾ ಬೆಂಬಲಿಗ ಪಂಚಾಯತ್ ರಾಜ್ ಸಚಿವ ಡಾ.ಎಚ್.ಸಿ.ಮಹದೇವಪ್ಪ
ರಾಜ್ಯದ ಸ್ಥಳೀಯ ಬಿಎಸ್ಪಿ ನಾಯಕರೂ ಒತ್ತಡ ಹೇರುತ್ತಿದ್ದಾರೆ. ಈ ನಡುವೆ ಜೆಡಿ (ಯು) ಅಧ್ಯಕ್ಷ ಶರದ್ ಯಾದವ್ ಅವರು ಇನ್ನೊಬ್ಬ ಬೆಂಬಲಿಗ ಬಿ.ಆರ್.ಪಾಟೀಲ್ ಮೂಲಕ ಸಿದ್ದರಾಮಯ್ಯನವರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
'ನಾವೇನು ಎನ್ಡಿ ನಲ್ಲಿ ಬಹಳ ಕಾಲ ಇರುವು ದಿಲ್ಲ. ಹೊರ ಬಂದ ಮೇಲೆ ಹಳೆಯ ತಲೆಗಳನ್ನು ಹೊರಗಿಟ್ಟು ಹೊಸ ಜನತಾದಳ ಕಟ್ಟೋಣ ಎನ್ನುವ ಸಂದೇಶವನ್ನು ಅವರು ರವಾನಿಸಿದ್ದಾರೆ. ಎಂದಿನಂತೆ ಜಾರ್ಜ್ ಫರ್ನಾಂಡಿಸ್ ಪೋನಿನ ಮೇಲೆ ಪೋನ್ ಮಾಡಿದ್ದಾರೆ. ಆದರೆ ಅವರ ಬಿಜೆಪಿ- ಆರ್ ಎಸ್ ಎಸ್ ಸಖ್ಯದಿಂದಾಗಿ ಸಿದ್ದರಾಮಯ್ಯ ದೂರವೇ ಇರಲು ನಿರ್ಧರಿಸಿದ್ದಾರೆ.
ಉಳಿದದ್ದು ಕಾಂಗ್ರೆಸ್: ಆರ್.ಎಲ್.ಜಾಲಪ್ಪ, ಜಾಫರ್ ಷರೀಪ್, ಜನಾರ್ದನ ಪೂಜಾರಿ, ವಿಶ್ವನಾಥ್, ಡಿ.ಕೆ.ಶಿವಕುಮಾರ್ ಮೊದಲಾದ ನಾಯ ಕರೇ ಸಿದ್ದರಾಮಯ್ಯನವರ ಸೇರ್ಪಡೆ ಬಗ್ಗೆ ಸೋನಿ ಯಾಗಾಂಧಿ ಅವರ ಜತೆ ಚರ್ಚಿಸಿದ್ದಾರೆ. ಸಿದ್ದರಾಮಯ್ಯನವರನ್ನು ಸೇರಿಸಿಕೊಂಡರೆ ಮಧ್ಯಾವಧಿ ಚುನಾ ವಣೆ ಅನಿವಾರ್ಯ ಎಂದು ಗೊತ್ತಿರುವ ಕಾಂಗ್ರೆಸ್ ಅದಕ್ಕೆ ತಯಾರಾಗುವ ವರೆಗೆ ಈ ಬಗ್ಗೆ ನಿರ್ಧಾರ ಕೈಗೊ ಳ್ಳುವುದು ಕಷ್ಟ.
ಒಗ್ಗದ ಸಂಸ್ಕೃತಿ: ಕಾಂಗ್ರೆಸ್ನ ಡೊಗ್ಗು ಸಲಾಂ ಸಂಸ್ಕೃತಿ ಅತಿ ಸ್ವಾಭಿಮಾನಿ ಸಿದ್ದರಾಮಯ್ಯನವರಿಗೆ ಒಗ್ಗಲಾರದು ಎನ್ನುವ ಅಭಿಪ್ರಾಯವೂ ಇದೆ. ಇವೆಲ್ಲಕ್ಕಿಂತಲೂ ಮುಖ್ಯವಾದುದು ಸಿದ್ದರಾಮಯ್ಯನವರನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವವರೆಲ್ಲ ದೇವೇಗೌಡರ ವಿರೋಧಿಗಳು. ಅವರ ಪ್ರಯತ್ನಕ್ಕೆ ಸಿದ್ದರಾಮಯ್ಯನವರ ಮೇಲಿನ ಪ್ರೀತಿಗಿಂತಲೂ ಹೆಚ್ಚಾಗಿ ಗೌಡರ ಮೇಲಿನ ದ್ವೇಷ ಕಾರಣ. ಜೆಡಿ (ಎಸ್) ಅನ್ನು ಒಡೆಯುವ ಉದ್ದೇಶ ಸಾಧನೆಯಾದ ಮೇಲೆ ಈ ಕಾಂಗ್ರೆಸ್ ನಾಯಕರ ಅಭಿಮಾನ ಈಗಿನ ರೀತಿಯಲ್ಲಿಯೇ ಉಳಿಯಬಹುದೇ ಎಂಬ ಸಂಶಯ ಸಿದ್ದರಾಮಯ್ಯನವರ ಬೆಂಬಲಿಗರಲ್ಲಿಯೇ ಇದೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯನವರು ಮುಂದಿನ ಕೆಲವು ದಿನ ತಮ್ಮ ಹಿತೈಷಿಗಳ ಜತೆ ಮುಕ್ತವಾಗಿ ಚರ್ಚೆ ನಡೆಸಲಿದ್ದಾರೆ. ಇದರ ನಡುವೆ ಸಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜಕೀಯೇತರ ಹಿಂದುಳಿದ ದಲಿತ- ಅಲ್ಪಸಂಖ್ಯಾತರ ಸಮ್ಮೇಳನಗ ಳನ್ನು ರಾಜ್ಯಾದ್ಯಂತ ನಡೆಸಲು ಅವರ ಬೆಂಬಲಿಗರು ನಿರ್ಧರಿಸಿದ್ದಾರೆ. ಇದರ ಮುಂದಿನ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಆ ಸಮ್ಮೇಳನದಲ್ಲಿಯೇ ಮುಂದಿನ ಹೆಜ್ಜೆಯ ದಿಕ್ಕು ಗೊತ್ತಾಗಬಹುದು.