08/07/2026
*ಮಾರಗೌಡನಹಳ್ಳಿ ಹೊಂಬೇಗೌಡ ಮರೀಗೌಡ* ಒಕ್ಕಲುತನವೆ ಪ್ರಧಾನವೆನಿಸಿದ ಕುಟುಂಬದಲ್ಲಿ 1916 ರಲ್ಲಿ ಜನಿಸಿದ ಶ್ರೀಯುತರ 110 ನೇ ಜನ್ಮದಿನದ ಜಯಂತೋತ್ಸವ ಸಂಭ್ರಮ.
ವ್ಯಕ್ತಿಯಾಗಿ ನಮ್ಮೊಡನೆ ದೈಹಿಕವಾಗಿ ಇಲ್ಲದ ಮರಿಗೌಡರು ತಮ್ಮ ಸಾಧನೆಗಳ ಮೂಲಕ ಇಂದಿಗೂ ಮುಂದೆಯೂ ನಮ್ಮೊಡನೇಯೇ ಇರುತ್ತಾರೆ ಅದಕ್ಕಾಗಿಯೇ ಅವರನ್ನು ತೋಟಗಾರಿಕಾ ಇಲಾಖೆಯ ಪಿತಾಮಹ ಎಂದು ಸಹ ಕರೆಯುತ್ತಾರೆ.
ಜೀವನಕ್ಕೆ ದವಸ ಧಾನ್ಯ ನಂಬಿದ್ದ ರೈತಾಪಿ ವರ್ಗಕ್ಕೆ ಫಲಪುಷ್ಪ ಬೆಳೆಸುವ ಮೂಲಕ ಕಾಂಚಾಣ ಮಾರ್ಗವನ್ನು ತೋರಿಸಿದ ಕೀರ್ತಿ ಡಾ. ಎಂ.ಎಚ್. ಮರಿಗೌಡ ಅವರದು. ದೇಶದ ನಕಾಶೆಯಲ್ಲಿ ‘ತೋಟಗಾರಿಕೆ ಬೀಡು’ ಎಂಬ ಖ್ಯಾತಿ ಕರ್ನಾಟಕಕ್ಕೆ ದೊರೆಯಲು ಕಾರಣಕರ್ತ ಎನ್ನುವ ಹೆಗ್ಗಳಿಕೆಯೂ ಅವರಿಗೇ ಸಲ್ಲಬೇಕು.
ಮರಿಗೌಡರು ಪ್ರಾಥಮಿಕ ಶಾಲೆ ಓದಿದ್ದು ಹತ್ತಿರದ ಬನ್ನೂರಿನಲ್ಲಿ. ವಿಜ್ಞಾನದಲ್ಲಿ ಪದವಿ ಗಳಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಲಖನೌ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಗಳಿಸಿದ ಅವರು, ಡಾಕ್ಟರೇಟ್ ವ್ಯಾಸಂಗ ಮಾಡಿದ್ದು ಅಮೇರಿಕಾದ ಹಾರ್ವಂಡ್ ವಿಶ್ವವಿದ್ಯಾನಿಲಯದಲ್ಲಿ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೆಂಗಳೂರಿನ ಲಾಲ್ಬಾಗ್ನಲ್ಲಿ ಸಹಾಯಕ ಸೂಪರಿಂಡೆಂಟ್ ಆಗಿ ಸೇವೆ ಆರಂಭಿಸಿದ್ದ (1942ರಲ್ಲಿ) ಮರಿಗೌಡರು – ವಿಶೇಷ ತರಬೇತಿ ಹಾಗೂ ಡಾಕ್ಟರೇಟ್ ವ್ಯಾಸಂಗ ಪಡೆದ ಬಳಿಕ ಲಾಲ್ಬಾಗ್ ಸೂಪರಿಂಡೆಂಟ್ ಆಗಿ 1951ರಲ್ಲಿ ಅಧಿಕಾರ ಸ್ವೀಕರಿಸಿದರು.
ತೋಟಗಾರಿಕೆ ಇಲಾಖೆಗೆ ಪ್ರತ್ಯೇಕ ಅಸ್ತಿತ್ವ ಇಲ್ಲದ ಆ ದಿನಗಳಲ್ಲಿ ‘ಉದ್ಯಾನ ಇಲಾಖೆ’ ಎಂಬ ಹೆಸರಿತ್ತು. ಬೆಂಗಳೂರಿನ ಲಾಲ್ಬಾಗ್ ಇದರ ಕೇಂದ್ರ ಸ್ಥಳ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೋಟಗಾರಿಕಾ ಶಾಖೆ, ಸ್ವತಂತ್ರ ಇಲಾಖೆಯಾಗಿ ರೂಪುಗೊಂಡಿದ್ದು 1963ರಲ್ಲಿ. ಇದರ ಮೊದಲ ನಿರ್ದೇಶಕರು ಮರಿಗೌಡ. ‘ಉದ್ಯಾನ ಇಲಾಖೆ’ ವ್ಯಾಪ್ತಿಯಲ್ಲಿ ಲಾಲ್ಬಾಗ್, ಕಬ್ಬನ್ ಪಾರ್ಕ್, ಕೆ.ಆರ್.ಎಸ್.ನ ಬೃಂದಾವನಗಳು ಮಾತ್ರವಿದ್ದವು. ಆನಂತರ ಇದಕ್ಕೆ ಸೇರ್ಪಡೆಗೊಂಡಿದ್ದು ಕೆಮ್ಮಣ್ಣು ಗುಂಡಿ ಹಾಗೂ ನಂದಿ ಬೆಟ್ಟ.
ಇವೆಲ್ಲ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದ ಮರಿಗೌಡರನ್ನು ಇಲಾಖೆಗೆ ಕಾಲಿಟ್ಟ ದಿನದಿಂದಲೂ ರೈತರ ಹಿತಚಿಂತನೆ ಕಾಡತೊಡಗಿತ್ತು. ಕೃಷಿ ಕುಟುಂಬದಲ್ಲಿ ಹುಟ್ಟಿ ಸಸ್ಯಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರು ಇಂಗ್ಲೆಂಡ್ನ ‘ಕ್ಯೂ ಉದ್ಯಾನ’ಕ್ಕೆ ತರಬೇತಿಗೆಂದು ಹೋದಾಗ ಆದ ಅನುಭವಗಳೆಲ್ಲವೂ ರೈತಪರ ದೃಷ್ಟಿಕೋನವನ್ನೇ ಹೊಂದಿದ್ದವು.
‘ಉದ್ಯಾನ ಶಾಖೆ’ಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೇ ಅಂದುಕೊಂಡಿದ್ದನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ನಿರತರಾದ ಮರಿಗೌಡರು, ಕೇವಲ ಉದ್ಯಾನಗಳ ನಿರ್ವಹಣೆಗೆ ಸೀಮಿತವಾಗಿದ್ದ ಇಲಾಖೆಯನ್ನು ರೈತರ ಬಳಿಗೆ ಕೊಂಡೊಯ್ಯಲು ಮುಂದಾದರು. ರಾಗಿ, ಜೋಳ, ಭತ್ತದೊಂದಿಗೆ ಹಣ್ಣು–ತರಕಾರಿ ಸಹ ಗ್ರಾಮೀಣರ ಬದುಕಿಗೆ ಅನಿವಾರ್ಯ ಎನ್ನುವುದು ಮರಿಗೌಡರ ಮೊದಲ ಮಂತ್ರ. ಗ್ರಾಮಬದುಕಿಗೆ ಪೂರಕವಾಗಿ ತೋಟಗಾರಿಕೆ ನಡೆಯುವುದರಿಂದ ರೈತರ ಬದುಕನ್ನು ಹಸನುಗೊಳಿಸುವುದು ಅವರ ಗುರಿಯಾಗಿತ್ತು.
ರಾಜ್ಯದುದ್ದಕ್ಕೂ ಅನೇಕ ಪಾಳುಬಿದ್ದ ಜಮೀನುಗಳು ಹಣ್ಣು ಹಂಪಲು ಬೆಳೆಯುವ ಕ್ಷೇತ್ರಗಳಾಗಿ ಬೆಳವಣಿಗೆ ಕಂಡವು. ರಾಜ್ಯದ 1800 ಎಕರೆಯಲ್ಲಿ 394 ತೋಟಗಾರಿಕಾ ಕ್ಷೇತ್ರ
ಗಳನ್ನು ಕಟ್ಟಿಕೊಟ್ಟ ಹೆಗ್ಗಳಿಕೆ ಮರಿಗೌಡರದ್ದು! ಇದರಿಂದ ತಾಜಾ ಹಣ್ಣು – ತರಕಾರಿಗಳು ಕಡಿಮೆ ಬೆಲೆಯಲ್ಲಿ ಜನತೆಗೆ ಸಿಕ್ಕಿದರೆ, ಇಲಾಖೆಗೆ ಹೊಸತೊಂದು ಆದಾಯ ಮೂಲ ತೆರೆದುಕೊಂಡಿತು. ಕೃಷಿ ಚಮತ್ಕಾರಗಳನ್ನು ಎಡಬಿಡದೆ ಮಾಡುತ್ತಾ ಹೋದ ಮರಿಗೌಡರು ಜನರಲ್ಲಿ ಸಸ್ಯಪ್ರೀತಿಯನ್ನು ಬೆಳೆಸಿದರು.
ಲಾಲ್ಬಾಗ್ ಬಹುಬಗೆಯಿಂದ ಅಭಿವೃದ್ಧಿಗೊಳ್ಳಲು ಮರಿಗೌಡರ ಶ್ರಮ ಉಲ್ಲೇಖನೀಯ. ನೂರು ಎಕರೆಗಳಷ್ಟಿರುವ ಕೆಂಪುತೋಟವನ್ನು 240 ಎಕರೆಗಳಿಗೆ ಹಬ್ಬಿಸಲು ಅವರು ಮುಖ್ಯಕಾರಣ. ಉದ್ಯಾನವಾಗಿ ಖ್ಯಾತಿಪಡೆದ ಲಾಲ್ಬಾಗ್ ಅನ್ನು ತೋಟಗಾರರ ಸಮೂಹಕ್ಕೂ ಗಮನ ಸೆಳೆಯುವಂತೆ ಮಾಡಿದ ಅವರು, ಫಲಪುಷ್ಪ ಪ್ರದರ್ಶನಗಳಿಗೆ ಮೆರುಗು ತಂದರು. ‘ಸಸ್ಯ ಸಂತೆ’ಗಳನ್ನು ಸಂಘಟಿಸಿದರು.
ಸಹಕಾರಿ ತತ್ವದ ಆಧಾರದ ಮೇಲೆ ಹಾಪ್ಕಾಮ್ಸ್ನಂತಹ ನಿತ್ಯೋಪಯೋಗಿ ಪದಾರ್ಥಗಳ ಮಾರುವ ಮಾರಾಟ ಜಾಲವನ್ನು ನಾಡಿನೆಲ್ಲೆಡೆ ಹರಡಲು ನಾಂದಿ ಹಾಡಿದ್ದು ಮರೀಗೌಡರ ವ್ಯಕ್ತಿತ್ವದ ಫಲ.
ಶಾಲಾ ದಿನಗಳಲ್ಲಿಯೇ ಕವಿ ಕುವೆಂಪು ಅವರ ಒಡನಾಟ ಹೊಂದಿದ್ದ ಮರಿಗೌಡರು, ತೋಟಗಾರಿಕಾ ವಲಯದಲ್ಲಿ ಮಾಡಿದ ಸಾಧನೆಯನ್ನು ಕುವೆಂಪು ತಮ್ಮ ಜೀವನ ವೃತ್ತಾಂತ ‘ನೆನಪಿನ ದೋಣಿ’ಯಲ್ಲಿ ಉಲ್ಲೇಖಿಸಿರುವುದು ಮಾತ್ರವಲ್ಲ; ‘ದೇವಾಲಯವೀ ಹೂವಿನ ತೋಟಂ’ – ‘ಕೈಮುಗಿದು ಒಳಗೆ ಬಾ ಇದು ಸಸ್ಯಕಾಶಿ’ ರೀತಿಯ ಅರ್ಥಪೂರ್ಣ ಧ್ಯೇಯವಾಕ್ಯಗಳನ್ನು ಲಾಲ್ಬಾಗ್ಗಾಗಿ ರಚಿಸಿಕೊಟ್ಟದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಾಲ್ ಬಾಗ್ ಉಧ್ಯಾನವನದಲ್ಲಿ ಡಾ ಎಂ ಹೆಚ್ ಮರೀಗೌಡರ ಪ್ರತಿಮೆಯನ್ನು ಸ್ಥಾಪಿಸಿರುವುದು ಗೌಡರ ಮೇರುವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
*ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಮರೀಗೌಡರು:-*
ಮರಿಗೌಡರ ಸಹೋದರ ಮಂಚಿಗಯ್ಯನವರು ಒಕ್ಕಲಿಗ ಸಮುದಾಯದ ಪ್ರಥಮ ಇಂಜಿನಿಯರ್ ಎನಿಸಿದ್ದಾರೆ ಎಲ್ಲಾ ಸಮಾಜಗಳ ಹಿತ ಚಿಂತಕರಾದ ಮರೀಗೌಡರು ಹುಟ್ಟಿದ ಜನಾಂಗವನ್ನು ಸಹ ಕಡೆಗಾಣಲಿಲ್ಲ ಅದಕ್ಕಾಗಿಯೇ ಸಮಾಜದ ಸೇವೆ ಮಾಡಲು *1979 ರಿಂದ 84* ಹಾಗು *1987 ರಿಂದ 92* ಎರಡು ಅವಧಿಗೆ ಒಕ್ಕಲಿಗ *ಸಮುದಾಯದ ಆಂತರಿಕ ಸರ್ಕಾರ ರಾಜ್ಯ ಒಕ್ಕಲಿಗರ ಸಂಘದ* ಚುಕ್ಕಾಣಿ ಹಿಡಿದು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.
ತಮ್ಮ ದಕ್ಷತೆಯ ಮಾನದಂಡದ ಆಧಾರದ ಮೇಲೆ ಅಧ್ಯಕರಾಗಿ ಸರ್ಕಾರದ ಮೇಲೆ ಒತ್ತಡ ತಂದು ಕೆಂಪೇಗೌಡ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಅನುಮತಿ ಪಡೆದದ್ದು ಮರೀಗೌಡರ ಆಳ್ವಿಕೆ ಅವಧಿಯಲ್ಲಿ ಅದು ಅವರ ಸಾಧನೆಗೆ ಹಿಡಿದ ಕೈಗನ್ನಡಿ.
ಅಂದು ಸಮದಾಯದ ಹಿತಕ್ಕಾಗಿ ತಂದ ಸಂಸ್ಥೆಗಳು ಹಲವು ವರ್ಷಗಳು ಒಕ್ಕಲಿಗರ ಹಿತ ಕಾದವು ಸಂಸ್ಥೆ ಬೃಹದಾಕಾರವಾಗಿ ಬೆಳೆಯಿತು ಆದರೆ ಬರುಬರುತ್ತಾ ಅದು ಹಳಿ ತಪ್ಪಿತು.
ಮರೀಗೌಡರು ಹುಟ್ಟೂರಿಗೆ ನನ್ನ ಊರಿಗೆ ಕೇವಲ ಮೂರ್ನಾಲ್ಕು ಕಿಮೀ ಅಂತರ ನಿಜಕ್ಕೂ ಇದು ನನಗೆ ವೈಯಕ್ತಿಕವಾಗಿ ಹೆಮ್ಮೆಯ ವಿಷಯ ತೀರ ದೊಡ್ಡ ಪ್ರಮಾಣದ ಊರಲ್ಲವಾದರು ಕೀರ್ತಿಯ ವಿಷಯದಲ್ಲಿ ನಂಬರ್ 1 ಮರೀಗೌಡ, ಹೊಂಬೇಗೌಡ, ಮಂಚಿಗಯ್ಯರಂತಹ ಶ್ರೆಷ್ಟರ ಪಡೆದ ನಾವು ನಿಜಕ್ಕೂ ಧನ್ಯರು..
*ಸಾಧಕರಿಗೆ ಸಾವಿಲ್ಲ ಎಂಬುದು ಸಾರ್ವಕಾಲಿಕ ಸತ್ಯ..*
ಸತೀಶ್ ಗೌಡ ಬೀಡನಹಳ್ಳಿ ✍️