12/08/2026
*ಬಂದ್ ಯಾರಿಗಾಗಿ ? ಏತಕ್ಕಾಗಿ ? ಬಂದ್ ಹೆಸರಲ್ಲಿ ಜನರಿಗೇ ಶಿಕ್ಷೆ ಏಕೆ ?*
ರಾಜಕೀಯ ಹಾರಾಟಗಳಾಗಲಿ, ಸಾಮಾಜಿಕ ಸಮಸ್ಯೆಗಳಾಗಲಿ, ಅಥವಾ ಭಾಷಾ ಸಮಸ್ಯೆಯ ಹೋರಾಟಗಳಾಗಲಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಇಡೀ ಸಮಾಜವನ್ನೇ ಸ್ತಬ್ಧಗೊಳಿಸುವ ಬಂದ್ ಎಂಬ ಸಂಸ್ಕೃತಿ ಇನ್ನು ಮುಂದುವರಿಯಬೇಕೇ ಎಂಬ ಪ್ರಶ್ನೆಯನ್ನು ಗಂಭೀರವಾಗಿ ಚಿಂತಿಸುವ ಸಮಯ ಬಂದಿದೆ. ಒಂದು ದಿನದ ಬಂದ್ನಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತದೆ ಎಂಬುದು ಚರ್ಚೆಯ ವಿಷಯವಾಗಿರಬಹುದು. ಇದರಿಂದ ಸಾಮಾನ್ಯ ಜನರಿಗೆ ಆಗುವ ನಷ್ಟದ ಬಗ್ಗೆ ಕಳಕಳಿಯಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ್ ಎಂಬ ಪದವೇ ಇಂದು ತನ್ನ ಅರ್ಥ ಕಳೆದುಕೊಂಡಂತಿದೆ. ಬಂದ್ ಯಾರ ವಿರುದ್ಧ ? ಯಾರಿಗಾಗಿ ? ಏತಕ್ಕಾಗಿ ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವೇ ಇಲ್ಲದಂತಾಗಿದೆ.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದಾದರೂ ಒಂದು ಸಂಘಟನೆ, ರಾಜಕೀಯ ಪಕ್ಷ ಅಥವಾ ಸಮುದಾಯಕ್ಕೆ ಸಣ್ಣ ಅಸಮಾಧಾನವಾದರೇ ಸಾಕು, ಕ್ಷಣಾರ್ಧದಲ್ಲಿ ಕರೆ ನೀಡುವುದು ಬಂದ್. ಆದರೆ ಈ ಬಂದ್ ಎನ್ನುವ ಮಾರಕ ಅಸ್ತ್ರದ ಹಿಂದಿನ ಅಸಲಿ ಮರ್ಮ ಯಾರಿಗಾದರೂ ಅರ್ಥವಾಗಿದೆಯೇ ? ಅಥವಾ ಇದು ಕೇವಲ ಜನರ ದೈನಂದಿನ ಬದುಕನ್ನು ಅಸ್ತವ್ಯಸ್ತಗೊಳಿಸುವ ಹಠ ಮಾರಿತನವೇ ? ಗಂಭೀರವಾಗಿ ಯೋಚಿಸಬೇಕಾದ ಹಾಗೂ ಈ ವಿಚಾರವಾಗಿ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ನನ್ನದು. ಇದು ಯಾರ ಪರವೂ ಅಲ್ಲ, ಯಾರ ವಿರುದ್ದವೂ ಅಲ್ಲ. ಇದು ಜನರಿಂದ, ಜನರಿಗಾಗಿ ಜನರ ಭಾವನೆ, ಜನರಿಗೋಸ್ಕರ ಅಷ್ಟೇ. ಇದು ಓದಿದ ಮೇಲಾದರೂ ಬಂದ್ನ ಬಂದ್ ಮಾಡಿದರೆ ಅಷ್ಟೇ ಸಾಕು.
*ಹಿಂದೆ ಬಂದ್*
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬಂದ್ಗೆ ಒಂದು ಉದ್ದೇಶವಿತ್ತು. ಆಗ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಹೊಡೆತ ನೀಡಲಾಗುತ್ತಿತ್ತು. ಅದು ವಿದೇಶಿ ಆಡಳಿತದ ವಿರುದ್ಧದ ಹೋರಾಟವಾಗಿತ್ತು. ಅಸಹಕಾರ ಚಳುವಳಿಯ ಉದ್ದೇಶ ಸಹಾ ಇದೇ ಆಗಿತ್ತು. ಆಗಿನ ಸರ್ಕಾರ ನಮ್ಮದಾಗಿರಲಿಲ್ಲ, ಅದು ನಮ್ಮನ್ನು ಶೋಷಿಸುತ್ತಿದ್ದ ಪರಕೀಯರ ಸರಕಾರವಾಗಿತ್ತು.
ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಏಕೆಂದರೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿವೆ. ನಮ್ಮದು 'ಜನರಿಂದ, ಜನರಿಗಾಗಿ, ಜನರಿಗೋಸ್ಕರ' ಇರುವ ಪ್ರಜಾಪ್ರಭುತ್ವ ಸರ್ಕಾರ. ಇಲ್ಲಿ ಅಧಿಕಾರದಲ್ಲಿರುವವರೂ ನಮ್ಮವರೇ, ಆಡಳಿತ ಯಂತ್ರವೂ ನಮ್ಮದೇ. ಹೀಗಿರುವಾಗ, ನಮ್ಮದೇ ಸರ್ಕಾರದ ವಿರುದ್ಧ ಬಂದ್ ಆಚರಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿದರೆ, ಬಸ್ಗಳನ್ನು ಜಖಂ ಗೊಳಿಸಿದರೆ, ಕೈಗಾರಿಕೆಗಳನ್ನು ಮುಚ್ಚಿಸಿದರೆ ನಿಜಕ್ಕೂ ನಷ್ಟವಾಗುವುದು ಯಾರಿಗೆ ? ಸರ್ಕಾರಕ್ಕೆ ಅಂದರೆ ನಮಗೇ. ಬಂದ್ ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದರೆ, ಅದು ನಮಗೆ ನಾವೇ ಕತ್ತೆಲೆಗೆ ದೂಡಿಕೊಂಡಂತೆ ಮತ್ತು ನಮ್ಮ ಕೈಯಾರೆ ನಮಗೆ ನಾವೇ ನಷ್ಟ ಮಾಡಿಕೊಂಡ ಹಾಗೆ.
*ಬಂದ್ ಸಮಸ್ಯೆಗಳು*
ಆಸ್ಪತ್ರೆಗೆ ತೆರಳುವ ರೋಗಿಗಳ ನರಳಾಟ ಹೇಳತೀರದ್ದಾಗುತ್ತದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟ ಗರ್ಭಿಣಿಯರು, ಹೃದಯ ರೋಗಿಗಳು ರಸ್ತೆಯಲ್ಲಿ ವಾಹನಗಳಿಲ್ಲದೆ ಒದ್ದಾಡುವ ದೃಶ್ಯ ಮನಕಲುಕುವಂತಿರುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಪರೀಕ್ಷೆಗಳೋ ಅಥವಾ ತರಗತಿಗಳೋ ಇರುವ ಸಂದರ್ಭದಲ್ಲಿ ಘೋಷಿಸುವ ಬಂದ್ಗಳು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತವೆ. ದಿನಗೂಲಿ ನೌಕರರ ಕಣ್ಣೀರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಆ ದಿನ ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು ಎನ್ನುವ ಬಡ ಕೂಲಿ ಕಾರ್ಮಿಕರ ಗೋಳು ಕೇಳುವವರೇ ಇಲ್ಲದಂತಾಗುತ್ತದೆ. ದಿನಗೂಲಿ ಕಾರ್ಮಿಕರಿಗೆ. ಅಂಗಡಿ ತೆಗೆಯುವ ಸಣ್ಣ ವ್ಯಾಪಾರಿಗಳಿಗೆ. ಆಟೋ, ಟ್ಯಾಕ್ಸಿ ಚಾಲಕರಿಗೆ. ಹೋಟೆಲ್ ನಡೆಸುವವರಿಗೆ. ಶಾಲೆಗೆ ಹೋಗಬೇಕಾದ ಮಕ್ಕಳಿಗೆ. ಆಸ್ಪತ್ರೆಗೆ ಹೋಗಬೇಕಾದ ರೋಗಿಗಳಿಗೆ. ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳಿಗೆ. ಪ್ರಯಾಣಿಕರಿಗೆ. ಸಾಮಾನ್ಯ ಜನರ ಬದುಕನ್ನೇ ಬಂದ್ ಅಸ್ತವ್ಯಸ್ತಗೊಳಿಸುವ ಬಂದ್ ಹಾಗೂ ಬಂದ್ನ ಹೆಸರಿನಲ್ಲಿ ರಸ್ತೆ ತಡೆ, ಬಸ್ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಇವು ಪ್ರಜಾಪ್ರಭುತ್ವದ ಲಕ್ಷಣಗಳಲ್ಲ.
*ಬಂದ್ ನಾಯಕರು*
ಅತ್ಯಂತ ನೋವಿನ ಸಂಗತಿ ಎಂದರೆ, ಬಂದ್ ಕರೆ ನೀಡುವ ಬಹುತೇಕ ನಾಯಕರು ನೆಪ ಮಾತ್ರಕ್ಕೆ ಬೀದಿಗಿಳಿಯುತ್ತಾರೆ. ನಂತರ ಭದ್ರತೆಯ ನೆಪವೊಡ್ಡಿ ಪೊಲೀಸರ ವಶಕ್ಕೆ ಹೋಗುತ್ತಾರೆ. ಆದರೆ ಬೀದಿಯಲ್ಲಿ ಸಿಲುಕಿಕೊಳ್ಳುವವರು ಸಾಮಾನ್ಯ ಜನ. ಬಂದ್ನಿಂದ ಹೊಟ್ಟೆ ಪಾಡಿಗಾಗಿ ದುಡಿಯುವ ಕಾರ್ಮಿಕನಿಗೆ ಆ ದಿನದ ಕೂಲಿ ಕೈತಪ್ಪುತ್ತದೆ. ತುರ್ತು ಚಿಕಿತ್ಸೆಗೆ ತೆರಳಬೇಕಾದ ರೋಗಿ ಸಂಕಷ್ಟ ಅನುಭವಿಸುತ್ತಾನೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿ ಆತಂಕದಲ್ಲಿ ದಿನ ಕಳೆಯುತ್ತಾನೆ. ಈ ಎಲ್ಲರ ಹಿಡಿಶಾಪ ಯಾರಿಗೆ ತಟ್ಟುತ್ತದೆ ? ಖಂಡಿತಾ ಹೋರಾಟಗಳು ಅಗತ್ಯ. ಪ್ರತಿಭಟನೆಗಳು ಪ್ರಜಾಪ್ರಭುತ್ವದ ಹಕ್ಕು. ಆದರೆ ಜನ ಜೀವನವನ್ನು ಬಂದ್ ಮಾಡಿ ಅಲ್ಲ. ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಹೋರಾಟ ನಡೆಸುವುದು ನಿಜವಾದ ಪ್ರಜಾಪ್ರಭುತ್ವದ ಮಾರ್ಗ.
*ಬಂದ್ ಪರಿಹಾರವಲ್ಲ. ಸಂವಾದವೇ ಪರಿಹಾರ*
ಜನರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ನಡೆಸುವ ಹೋರಾಟ ಯಾವತ್ತೂ ನ್ಯಾಯ ಸಮ್ಮತವಾಗಲಾರದು. ಜನರ ಪರದಾಟದ ಮೇಲೆ ಕಟ್ಟಿದ ಯಾವುದೇ ಹೋರಾಟಕ್ಕೆ ಇತಿಹಾಸದಲ್ಲಿ ಗೌರವ ಸಿಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಸಂವಿಧಾನ ನಮಗೆ ಹಕ್ಕು ನೀಡಿದೆ. ಆದರೆ ಆ ಪ್ರತಿಭಟನೆಯು ಇತರರ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಿರಬಾರದು. ಬಂದ್ ಎನ್ನುವುದು ಸಮಸ್ಯೆಗಳಿಗೆ ಪರಿಹಾರವಲ್ಲ, ಅದೊಂದು ವಿನಾಶಕಾರಿ ದಾರಿ. ಇನ್ನು ಮುಂದಾದರೂ ಈ ಅವೈಜ್ಞಾನಿಕ ಬಂದ್ ಸಂಸ್ಕೃತಿಗೆ ತಿಲಾಂಜಲಿ ಹಾಕಿ, ಚರ್ಚೆಗಳು ಮತ್ತು ಕಾನೂನುಬದ್ಧ ಹೋರಾಟಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪರಿಪಕ್ವತೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ.
*ಕೊನೆ ಮಾತು*
ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಇಂದು ಬೇಕಾಗಿರುವುದು ಬಂದ್ ಅಲ್ಲ, ಬದಲಿಗೆ ನೆಮ್ಮದಿ ಶಾಂತಿ ಹಾಗೂ ಅಭಿವೃದ್ದಿ ಅಭಿವೃದ್ಧಿ ಮಾತ್ರ. ಜನರಿಗೆ ಬೇಕಾಗಿರುವುದು ಸ್ಥಗಿತವಲ್ಲ, ಸ್ಥಿರತೆ. ಹೋರಾಟ ಇರಲಿ, ಆದರೆ ಅದು ಜನರ ಬದುಕನ್ನು ಕತ್ತಲೆಗೆ ತಳ್ಳುವಂತಿರದೆ, ಪರಿಹಾರದ ಬೆಳಕಿನತ್ತ ಕೊಂಡೊಯ್ಯುವಂತಿರಲಿ. "
ಬಂದ್ ಭೂತಕ್ಕೆ ತೆರೆ ಬಿದ್ದಾಗಲೇ ಪ್ರಜಾಪ್ರಭುತ್ವದ ನಿಜವಾದ ಗೆಲುವು ಸಾಧ್ಯ.
*ರಾಮ್ ಮೈಸೂರು*