05/04/2021
🟠🔻🔺🔻🔺🔻🔺🔻🔺🔻🔺🔻🔺🟠
*_ತಪ್ಪು ಕಲ್ಪನೆಗಳು..._*
_ಶಾಂತಿ ಪ್ರಕಾಶನ ಮಂಗಳೂರು_
✍🏻 *ಇಬ್ರಾಹೀಮ್ ಸಈದ್*
👉🏻 *_ಸಂಚಿಕೆ - 3_*
*~~~~~~~~~~~~~~~~~~~~~~~~~~~~~~~*
*ಅಧ್ಯಾಯ - ೦೧*
*_ಏಕದೇವ ವಿಶ್ವಾಸ_*
*ಅಕ್ಷಮ್ಯ ಅಪರಾಧ*
ಜನರು ತಾವಾಗಿ ಎಷ್ಟು ಮಂದಿ ದೇವರುಗಳನ್ನು ಸೃಷ್ಟಿಸಿಕೊಂಡಿದ್ದರೂ ವಾಸ್ತವದಲ್ಲಿ ದೇವತ್ವವು ಸಂಪೂರ್ಣವಾಗಿ ಏಕೈಕನೂ ಅಮರನೂ ಆದ ಅಲ್ಲಾಹನಿಗೆ ಮಾತ್ರ ಸೇರಿದೆ. ಈ ಅಗಾಧ ವಿಶ್ವದ ಸೃಷ್ಟಿ, ನಿಯಂತ್ರಣ, ಪರಿಪಾಲನೆಯ ಕಾರ್ಯಗಳನ್ನು ಯಾರ ನೆರವೂ, ಸಹಭಾಗಿತ್ವವೂ ಇಲ್ಲದೆ ಆತನೇ ಮಾಡುತ್ತಿರುವನು. ವಿಶ್ವದ ನೈಜ ಒಡೆತನ ಮತ್ತು ಅಧಿಪತ್ಯವು ಅವನಿಗೇ ಸೇರಿದೆ. ಅವನ ವ್ಯಕ್ತಿತ್ವದಲ್ಲಾಗಲೀ, ಗುಣ ವಿಶೇಷಗಳಲ್ಲಾಗಲೀ, ಅಧಿಕಾರಗಳಲ್ಲಾಗಲೀ, ಹಕ್ಕುಗಳಲ್ಲಾಗಲೀ ಯಾರೂ ಪಾಲುದಾರರಿಲ್ಲ. ಈ ವಿಶ್ವಾಸವು ಇಸ್ಲಾಮಿನ ಜೀವಾಳವಾಗಿದೆ. ಆದುದರಿಂದಲೇ ಪವಿತ್ರ ಕುರ್ಆನ್ ಬಹುದೇವಾರಾಧನೆ ಮುಂತಾದ ಏಕದೇವ ವಿಶ್ವಾಸಕ್ಕೆ ವಿರುದ್ಧವಾದ ಎಲ್ಲ ರೀತಿಯ ವಿಚಾರ ಆಚಾರಗಳನ್ನು ಅಕ್ಷಮ್ಯ ಅಪರಾಧವೆಂದು ಪರಿಗಣಿಸುತ್ತದೆ:
*_ಅಲ್ಲಾಹನು ತನ್ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದನ್ನು ಮಾತ್ರ ಎಂದೆಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತು ಅವನು ಕ್ಷಮಿಸಲಿಚ್ಛಿಸುವ ಇತರ ಎಲ್ಲವನ್ನೂ ಕ್ಷಮಿಸುವನು. ಅಲ್ಲಾಹನೊಂದಿಗೆ ಇತರ ಯಾರನ್ನಾದರೂ ಸಹಭಾಗಿಯನ್ನಾಗಿ ಮಾಡಿದವನು ಅತಿ ದೊಡ್ಡ ಸುಳ್ಳನ್ನು ಸೃಷ್ಟಿಸಿದನು ಮತ್ತು ಅತ್ಯಂತ ಘೋರ ಪಾಪವೆಸಗಿದನು._*
*{ಕುರ್ಆನ್-ಅಧ್ಯಾಯ:4/ಸೂಕ್ತ:48}*
ಇನ್ನೊಂದೆಡೆ ಪವಿತ್ರ ಕುರ್ಆನ್ ಬಹುದೇವತ್ವವನ್ನು ಅತಿದೊಡ್ಡ ಅನ್ಯಾಯವೆಂದು ಸಾರಿದೆ:
*_"ಖಂಡಿತವಾಗಿಯೂ 'ಬಹುದೇವವಿಶ್ವಾಸ' (ಬಹುದೇವಾರಾಧನೆಯು)ಮಹಾ ಅಕ್ರಮವಾಗಿದೆ"_*
*{ಕುರ್ಆನ್-ಅಧ್ಯಾಯ:3/ಸೂಕ್ತ:13}*
ಮತ್ತೊಂದೆಡೆ ಪವಿತ್ರ ಕುರ್ಆನ್ ಬಹುದೇವ ವಿಶ್ವಾಸವು ಮನುಷ್ಯನನ್ನು ಪರಲೋಕದಲ್ಲಿ ಸ್ವರ್ಗಕ್ಕೆ ಅನರ್ಹಗೊಳಿಸಿ ಶಾಶ್ವತ ನರಕ ಯಾತನೆಗೆ ಗುರಿಪಡಿಸುವುದೆಂದು ಸಾರಿದೆ:
*_ಅಲ್ಲಾಹನೊಂದಿಗೆ ಇನ್ನಾರನ್ನಾದರೂ ಸಹಭಾಗಿಗಳನ್ನಾಗಿ ಮಾಡಿದವನಿಗೆ ಅಲ್ಲಾಹನು ಸ್ವರ್ಗವನ್ನು 'ನಿಷಿದ್ಧ'ಗೊಳಿಸಿರುತ್ತಾನೆ ಮತ್ತು ಅವನ ವಾಸಸ್ಥಾನವು 'ನರಕ' ಆಗಿರುತ್ತದೆ. ಇಂತಹ ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ._*
*{ಕುರ್ಆನ್-ಅಧ್ಯಾಯ:5/ಸೂಕ್ತ:72}*
_ಈ ವಿವರಣೆಗಳಿಂದ ಒಬ್ಬ ಸಾಮಾನ್ಯ ವಾಚಕನಿಗೂ ಏಕದೇವ ವಿಶ್ವಾಸದ ಮಹತ್ವ ಮತ್ತು ಬಹುದೇವವಿಶ್ವಾಸದ ದುಷ್ಪರಿಣಾಮ ತಿಳಿಯದಿರಲಾರದು. ಮಾತ್ರವಲ್ಲ ಮುಸ್ಲಿಮರು ತಮ್ಮ ಈ ಏಕದೇವವಿಶ್ವಾಸದ ಬಗ್ಗೆ ಏಕೆ ಇಷ್ಟು ಭಾವುಕರಾಗಿದ್ದಾರೆಂಬುದೂ ಇದರಿಂದ ವ್ಯಕ್ತವಾಗುತ್ತದೆ. ಅಲ್ಲಾಹನ ಹೊರತು ಯಾರನ್ನೇ ಆಗಲಿ ಪೂಜಿಸುವುದು, ಪೂಜ್ಯನೆಂದು ಪರಿಗಣಿಸುವುದು, ಪ್ರಾರ್ಥನೆಗಳನ್ನು ಸಲ್ಲಿಸುವುದು, ಇತರ ವ್ಯಕ್ತಿಗಳ, ಶಕ್ತಿಗಳ ಅಥವಾ ವಸ್ತುಗಳ ಮುಂದೆ ಕೈ ಕಟ್ಟಿ ನಿಲ್ಲುವುದು, ಶಿರಬಾಗುವುದು, ಸಾಷ್ಟಾಂಗವೆರಗುವುದು, ಅವರಿಗೆ ಹರಕೆ ಹೊರುವುದು, ಅವರನ್ನು ಆಪತ್ಕಾಲದಲ್ಲಿ ಕರೆದು ಪ್ರಾರ್ಥಿಸುವುದು ಇತ್ಯಾದಿಗಳೆಲ್ಲವೂ ಮುಸ್ಲಿಮರ ಮಟ್ಟಿಗೆ ಅಕ್ಷಮ್ಯ ಅಪರಾಧಗಳು. ಈ ದೇವೇತರರು ದೇವಚರರೋ, ದೇವದೂತರೋ ಅಥವಾ ಮಹಾತ್ಮರೋ ಎಂಬುದು ನಗಣ್ಯ._
_ಹೆತ್ತ ತಾಯಿಯಾಗಲೀ, ಹುಟ್ಟಿಗೆ ಕಾರಣನಾದ ತಂದೆಯಾಗಲೀ, ವಿದ್ಯೆ ಕಲಿಸಿದ ಗುರುಗಳಾಗಲೀ, ಮಾರ್ಗದರ್ಶನ ಮಾಡುವ ನಾಯಕರಾಗಲೀ ಇವರೆಲ್ಲ ಗೌರವಾರ್ಹರೇ. ಆದರೆ ಅವರಾರೂ ಮನುಷ್ಯನ ಪಾಲಿಗೆ ದೇವರೋ ದೇವಸಮಾನರೋ ಖಂಡಿತ ಅಲ್ಲ. ಅಂತೆಯೇ ಮಾತೃಭೂಮಿ ಪ್ರೀತ್ಯರ್ಹವೇ ಹೊರತು ಪೂಜನೀಯವಲ್ಲ. ಈ ವಿಷಯದಲ್ಲಿ ಮುಸ್ಲಿಮರು ಯಾರ ಒತ್ತಡಕ್ಕೂ ಮಣಿಯಬಾರದು ಮತ್ತು ಯಾರಿಗಾಗಿಯೂ ದೇವೇತರ ಶಕ್ತಿ, ವ್ಯಕ್ತಿ ಅಥವಾ ವಸ್ತುಗಳನ್ನು ಪೂಜಿಸಬಾರದೆಂದು ಪವಿತ್ರ ಕುರ್ಆನ್ ಆಜ್ಞಾಪಿಸಿದೆ. ಆದುದರಿಂದಲೇ ಮುಸ್ಲಿಮರು ಇಂತಹ ವಿಷಯಗಳಲ್ಲಿ ಯಾವುದೇ ಹೊಂದಾಣಿಕೆಗೆ ಸಿದ್ಧರಾಗುವುದಿಲ್ಲ._
*~~~~~~~~~~~~~~~~~~~~~~~~~~~~~~*
*ಮುಂದುವರಿಯುವುದು...*
🟠🔻🔺🔻🔺🔻🔺🔻🔺🔻🔺🔻🔺🟠